ರಾಯಚೂರಲ್ಲಿ ನಿರಂತರ ವಿದ್ಯುತ್‍ಗಾಗಿ ನಡೆದ ಶಾಸಕರ ಹೈಡ್ರಾಮಾ ಅಂತ್ಯ

Public TV
1 Min Read

ರಾಯಚೂರು: ಜಿಲ್ಲೆಯಲ್ಲಿ ಎರಡು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿದ್ರೂ ಜನ ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದನ್ನೇ ವಿಷಯವಾಗಿಟ್ಟುಕೊಂಡ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನಿರಂತರ ವಿದ್ಯುತ್‍ಗಾಗಿ ನವೆಂಬರ್ 27 ರಿಂದ ಪಾದಯಾತ್ರೆ ಆರಂಭಿಸಿದ್ದರು.

ಭೂಸಂತ್ರಸ್ತರ ಬೇಡಿಕೆ ಈಡೇರಿಸಬೇಕು ಅಂತ ಆಗ್ರಹಿಸಿ ಗುರುವಾರ ಮಧ್ಯರಾತ್ರಿವರೆಗೂ ಹೋರಾಟ ನಡೆಸಿದರು. ರಾಯಚೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ಸುಮಾರು ನಾಲ್ಕು ಗಂಟೆಗಳ ಕಾಲ ಸಂಪೂರ್ಣ ಬಂದ್ ಆಗಿತ್ತು. 10 ಕೀ.ಮೀವರೆಗೆ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡಿದರು. ಆದ್ರೆ ಹೋರಾಟ ಮುಂದುವರೆಸಿದ್ದ ಶಾಸಕರು ಯಾವಾಗ ಜಿಲ್ಲಾಧಿಕಾರಿ ಹಾಗೂ ಜೆಸ್ಕಾಂ, ಕೆಪಿಸಿ ಅಧಿಕಾರಿಗಳು ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದರೋ ಅಲ್ಲಿಗೆ ಹೋರಾಟವನ್ನೇ ನಿಲ್ಲಿಸಿದ್ರು. ಬಂಧಿಸಿ ಬಿಡುಗಡೆ ಮಾಡುವ ಡ್ರಾಮಾ ಬಳಿಕ ಹೋರಾಟ ಅಂತ್ಯವಾಗಿದೆ.

12 ಗಂಟೆ ಕಾಲ ವಿದ್ಯುತ್ ನೀಡಲು ಸರ್ಕಾರ ಆದೇಶಿಸಿದೆ ಅಂತ ಕಾಂಗ್ರೆಸ್ ಎರಡು ದಿನಗಳ ಕೆಳಗೆ ಸಂಭ್ರಮಾಚರಣೆ ಮಾಡಿತ್ತು. ಅಧಿಕೃತ ಆದೇಶ ನೀಡಿದರೆ ಹೋರಾಟ ಹಿಂಪಡೆಯುತ್ತೇವೆ ಎಂದಿದ್ದ ಶಾಸಕರು ಯಾವ ಲಿಖಿತ ಆದೇಶವಿಲ್ಲದಿದ್ದರೂ ಹೋರಾಟ ಕೈಬಿಟ್ಟಿದ್ದಾರೆ.

ಒಟ್ಟಿನಲ್ಲಿ 24 ಗಂಟೆ ವಿದ್ಯುತ್ ನೀಡಿ, ಭೂಸಂತ್ರಸ್ತರಿಗೆ ಉದ್ಯೋಗ, ಮನೆ ನೀಡಿ ಅಂತ ಹೋರಾಟ ನಡೆಸಿದ ಶಾಸಕರು ಸುಸ್ತಾಗಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ನಡೆಸಿದ ಹೋರಾಟದಿಂದ ಯಾರಿಗೂ ಯಾವ ಪ್ರಯೋಜನವೂ ಆಗಲಿಲ್ಲ. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಮತದಾರರಿಗೆ ಹತ್ತಿರವಾಗಲು ನಡೆಸಿದ ಗಿಮಿಕ್‍ನಂತೆ ಹೋರಾಟ ಅಂತ್ಯಗೊಂಡಿದ್ದು ದುರಂತವೇ ಸರಿ.

Share This Article
Leave a Comment

Leave a Reply

Your email address will not be published. Required fields are marked *