ಕೈ ನಾಯಕರ ಸಂಧಾನ ವಿಫಲ – ಕ್ಷಮೆ ಕೋರಿದ ಸುಧಾಕರ್

Public TV
1 Min Read

ಬೆಂಗಳೂರು: ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ವಿಧಾನಸೌಧದಲ್ಲಿ ನಡೆದ ಘಟನೆಗಳ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಕ್ಷಮೆ ಕೋರಿದ್ದಾರೆ.

ಇಂದು 4 ಗಂಟೆಗೆ ವಿಧಾನಸೌಧಕ್ಕೆ ತೆರಳಿದ್ದೆ. ಆ ವೇಳೆ ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದೆ. ನಾನು ಸೇರಿದಂತೆ ಎಂಟಿಬಿ ನಾಗರಾಜ್ ಅವರೊಂದಿಗೆ ಆತ್ಮಸಾಕ್ಷಿಯಿಂದ ರಾಜೀನಾಮೆ ಪತ್ರವನ್ನ ಸ್ವಇಚ್ಛೆಯಿಂದ ಕೊಟ್ಟಿದೇವೆ. ನನ್ನ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್ ಅವರು ಜುಲೈ 17 ಕ್ಕೆ ಸಂದರ್ಶನ ಅವಧಿ ಕೊಟ್ಟಿದ್ದಾರೆ ಎಂದರು.

ನನಗೆ ಹಾಗೂ ನಾಗರಾಜ್ ಅಣ್ಣ ಅವರಿಗೆ ಪಕ್ಷದ ಮೇಲೆ ಗೌರವ ಇದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಕಳೆದ 13 ತಿಂಗಳಿನಿಂದ ಉಂಟಾದ ಒತ್ತಡದ ಪರಿಣಾಮ ರಾಜೀನಾಮೆ ನಿರ್ಧಾರ ಮಾಡಿದ್ದೇನೆ. ಕ್ಷೇತ್ರ ಜನರ ಅಭಿವೃದ್ಧಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಂಠಿತ ಆಗಿದ್ದ ಕಾರಣ ಅತ್ಯಂತ ಕಠಿಣ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

ವಿಧಾನಸೌಧದಲ್ಲಿ ನಡೆದ ಘಟನೆಯಿಂದ ಮಾಧ್ಯಮ ಸ್ನೇಹಿತರಿಗೆ ತೊಂದರೆ ಆಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ರಾಜೀನಾಮೆ ಬಳಿಕ ನನ್ನ ಮನವೊಲಿಕೆ ಮಾಡಲು ಮುಂದಾಗಿದ್ದರು. ಆದರೆ ಈ ಸಮಯದಲ್ಲಿ ಎಂಎಲ್‍ಸಿ ಒಬ್ಬರು ನಡೆದುಕೊಂಡ ರೀತಿ ಸರಿಯಲ್ಲ. ಆದರೆ ಸಿದ್ದರಾಮಯ್ಯ ಅವರು ರಾಜಿನಾಮೆ ವಾಪಸ್ ಪಡೆಯುವಂತೆ ಮನ ಒಲಿಸಿದರು. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇನೆ. ನಾನು ಮುಂಬೈಗೂ ಹೋಗುವುದಿಲ್ಲ, ದೆಹಲಿಗೂ ಹೋಗುವುದಿಲ್ಲ. ನಮ್ಮಗೆ ಯಾವುದೇ ಒತ್ತಡ ಕೂಡ ಇಲ್ಲ. 13 ತಿಂಗಳ ರಾಜಕೀಯ ಅಸ್ಥಿರತೆಯಿಂದ ನೋವುಂಟಾಗಿ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ. ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡಿಲ್ಲ. ಈ ಬಗ್ಗೆ ನಾನು ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *