ಭೈರತಿ ಬಸವರಾಜ್ ಪರ ಜೈಕಾರ ಕೂಗಿದ ಪೊಲೀಸ್ ಇನ್ಸ್‌ಪೆಕ್ಟರ್

Public TV
1 Min Read

– ಶಾಸಕರ ಹುಟ್ಟುಹಬ್ಬದ ದಿನದಂದು ಘಟನೆ

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್ ಅವರ ಹುಟ್ಟುಹಬ್ಬದ ದಿನದಂದು ಪೊಲೀಸರು ಕರ್ತವ್ಯ ನಿಷ್ಠೆಯನ್ನು ಮರೆತು ಜೈಕಾರ ಹಾಕಿ ಇಡೀ ರಾಜ್ಯದ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದ್ದಾರೆ.

ಶಾಸಕ ಭೈರತಿ ಬಸವರಾಜ್ ಅವರ ಹುಟ್ಟುಹಬ್ಬನವಾದ ಮಂಗಳವಾರ ನಡೆದ ಕಾರ್ಯಕರ್ತದಲ್ಲಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರ ಈ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಭೈರತಿ ಬಸವರಾಜ್ ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಬೆಂಬಲಿಗರು ಅದ್ದೂರಿಯಾಗಿ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಸಾಕಷ್ಟು ಜನ ಅಭಿಮಾನಿಗಳು, ಬೆಂಬಲಿಗರು ಆಗಮಿಸಿ ಶಾಸಕರಿಗೆ ಜನ್ಮದಿನದ ಶುಭಾಶಯ ತಿಳಿಸಿದರು. ಈ ನಡುವೆ ಕೆ.ಆರ್.ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಅಂಬರೀಶ್ ಹಾಗೂ ಸಿಬ್ಬಂದಿ ವರ್ಗ 53 ಕೆಜಿ ಕೇಕ್ ಹಾಗೂ ಬೆಳ್ಳಿ ಗದೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಕರ್ತವ್ಯದ ಅರಿವೇ ಇಲ್ಲದೆ ಇನ್ಸ್‌ಪೆಕ್ಟರ್ ಅಂಬರೀಶ್ ಶಾಸಕ ಭೈರತಿ ಬಸವರಾಜ್ ಅವರಿಗೆ ಜೈಕಾರ ಹಾಕಿದ್ದಾರೆ.

ಭೈರತಿ ಬಸವರಾಜ್ ಅವರ ಪರ ಜೈಕಾರ ಹಾಕದಂತೆ ಸುಮ್ಮನಿರಿಸಿದರೂ ಸುಮ್ಮನೆಯಾಗದ ಇನ್ಸ್‌ಪೆಕ್ಟರ್ ಜೈಕಾರ ಹಾಕಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪೊಲೀಸ್ ಇಲಾಖೆಯ ಮಾನ ಹರಜು ಹಾಕಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.

ಪೊಲೀಸ್ ವೃತ್ತಿಯಲ್ಲಿದ್ದು ಕರ್ತವ್ಯ ನಿಷ್ಠೆಯನ್ನು ಮರೆತು ಕಾರ್ಯಕರ್ತರಂತೆ ಭೈರತಿ ಬಸವರಾಜ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಜೈಕಾರ ಹಾಕಿರುವ ಪೊಲೀಸರ ವರ್ತನೆಗೆ ಸಾರ್ವಜನಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಮಾಹಿತಿ ಪಡೆದ ಡಿಸಿಪಿ ಅನುಚೇತ್ ಅವರು ಪೋಲಿಸ್ ಇನ್ಸ್‌ಪೆಕ್ಟರ್ ಅಂಬರೀಶ್ ಅವರಿಗೆ ನೋಟಿಸ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *