ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು: ಶಾಸಕ ಭೀಮಾನಾಯ್ಕ್

Public TV
1 Min Read

– ಸಿದ್ದು ಪರ 50ಕ್ಕೂ ಹೆಚ್ಚು ಶಾಸಕರ ಬೆಂಬಲ

ಬಳ್ಳಾರಿ: ವಿಪಕ್ಷ ಸ್ಥಾನ ಆಯ್ಕೆ ಸಂಬಂಧ ಭಾನುವಾರ ಕೆಪಿಸಿಸಿಯಲ್ಲಿ ಎಐಸಿಸಿ ವೀಕ್ಷಕರ ಸಭೆ ನಡೆಯಲಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಬೇಕು ಎಂದು  ಒತ್ತಾಯ ಮಾಡಿದ್ದಾರೆ.

ವಿಧಾನಸಭೆ, ವಿಧಾನ ಪರಿಷತ್, ಸಚೇತಕ ಸ್ಥಾನ ಆಯ್ಕೆ ಬಗ್ಗೆ ಭಾನುವಾರ ಮಧುಸೂದನ್ ಮಿಸ್ತ್ರಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ 3-4 ಹೆಸರು ಸಿದ್ಧಪಡಿಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಇದೇ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರ ಪರ ಒತ್ತಾಯ ಮಾಡಿದ್ದು, 50-60 ಜನ ಶಾಸಕರು ಸಿದ್ದರಾಮಯ್ಯ ಬೆಂಬಲಕ್ಕೆ ಇದ್ದಾರೆ ಎಂದು ಹೇಳಿದ್ದಾರೆ.

ಇತ್ತ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಜೋರಾಗಿದ್ದು, ಸಿದ್ದರಾಮಯ್ಯ ಬೆಂಬಲಿತ ಸುಮಾರು 20ಕ್ಕೂ ಹೆಚ್ಚು ಶಾಸಕರು ನಾಳೆ ಮಿಸ್ತ್ರಿ ಅವರನ್ನು ಭೇಟಿಯಾಗಿ, ಬ್ಯಾಟಿಂಗ್ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೇಲ್ಮನೆ ಸದಸ್ಯ ಸಿ.ಎಂ ಇಬ್ರಾಹಿಂ ಕೂಡ ಸಿದ್ದರಾಮಯ್ಯರೇ ಪ್ರತಿಪಕ್ಷ ನಾಯಕರಾಗಬೇಕು ಎಂದಿದ್ದು, ಸೋನಿಯಾ ಜೊತೆಗೆ ಈಗಲೂ ಸಿದ್ದರಾಮಯ್ಯ ಚೆನ್ನಾಗೇ ಇದ್ದಾರೆ ಎಂದಿದ್ದಾರೆ.

ಇದೇ ವೇಳೆ ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರವಾಗಿ ಮಾತನಾಡಿರುವ ಶಾಸಕ ಭೀಮಾನಾಯ್ಕ್ ಅವರು, ನಂಜುಡಪ್ಪ ವರದಿ ಪ್ರಕಾರ ಹಗರಿಬೊಮ್ಮನಹಳ್ಳಿ ತಾಲೂಕು ಹಿಂದುಳಿದ ತಾಲೂಕು ಆಗಿದೆ. ಹೊಸ ಜಿಲ್ಲೆ ಮಾಡುವುದಾದರೆ ಹಗರಿಬೊಮ್ಮನಹಳ್ಳಿ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಬೇಕು. ಹಗರಿಬೊಮ್ಮನಹಳ್ಳಿ ಭೌಗೋಳಿಕವಾಗಿ ಜಿಲ್ಲೆಯ ಮಧ್ಯಭಾಗದಲ್ಲಿದೆ. ಇನ್ನೊಂದು ಜಿಲ್ಲೆ ಸ್ಥಾಪನೆ ವಿಚಾರ ಸರ್ಕಾರದ ಮುಂದೆ ಇಲ್ಲವಾದರೆ ಅಖಂಡ ಬಳ್ಳಾರಿ ಜಿಲ್ಲೆಗೆ ನನ್ನ ಬೆಂಬಲವಿದೆ. ಹೊಸ ಜಿಲ್ಲೆ ಮಾಡುವುದಾದರೆ ಸಮಿತಿ ರಚನೆ ಮಾಡಿ. ಅದರ ಅನ್ವಯ ಜಿಲ್ಲೆಯ ಸ್ಥಾಪನೆಯಾಗಲಿ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *