ಉಪಸಮರದ ಪ್ರಚಾರದಲ್ಲಿ ತೊಡಗದೆ ಸೈಕ್ಲಿಂಗ್‍ನಲ್ಲಿ ಯತ್ನಾಳ್ ಬ್ಯುಸಿ

Public TV
1 Min Read

ವಿಜಯಪುರ: ಉಪಚುನಾವಣೆ ಕಣ ರಂಗೇರಿದ್ದು, ಎಲ್ಲಾ ಪಕ್ಷದ ನಾಯಕರು, ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಭರ್ಜರಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ತಕ್ಷಣವೇ ಚುನಾವಣೆ ಪ್ರಚಾರದಲ್ಲಿ ತೊಡಗುವಂತೆ ಸಿಎಂ ಸೂಚಿಸಿದ ಮೇಲೂ ಯತ್ನಾಳ್ ಮಾತ್ರ ಕಣಕ್ಕೆ ಇಳಿಯದೆ ದೂರ ಉಳಿದಿದ್ದಾರೆ.

ನಗರದ ಗೋಳಗುಮ್ಮಟದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಸೈಕ್ಲಿಂಗ್ ಆಯೋಜಿಸಲಾಗಿತ್ತು. ನೂರಕ್ಕೂ ಅಧಿಕ ಯುವಕರು ಸೈಕ್ಲಿಂಗ್‍ನಲ್ಲಿ ಭಾಗಿಯಾಗಿದ್ದರು. ನಗರದ ಗಾಂಧಿ ಚೌಕ್, ಶಿವಾಜಿ ಸರ್ಕಲ್, ಬಂಜಾರಾ ಕ್ರಾಸ್, ಆಶ್ರಮ ರಸ್ತೆ, ಸಿದ್ದೇಶ್ವರ ಗುಡಿ ಮೂಲಕ ಯುವಕರು ಸೈಕ್ಲಿಂಗ್ ಮಾಡಿಕೊಂಡು ಜಿಲ್ಲಾ ಕ್ರೀಡಾಂಗಣ ಸೇರಿದರು. ಇವರೊಂದಿಗೆ ಯತ್ನಾಳ್ ಅವರು ಕೂಡ ಸೈಕ್ಲಿಂಗ್‍ನಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಕಳೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೆನರ್ ಆಗಿ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಯತ್ನಾಳ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಉಪಚುನಾವಣಾ ಪ್ರಚಾರಕ್ಕೆ ತಕ್ಷಣವೇ ತೆರಳುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದರೂ ಮತಕ್ಷೇತ್ರಗಳ ಕಡೆಗೆ ಯತ್ನಾಳ್ ತಲೆ ಹಾಕಿಲ್ಲ. ಅಥಣಿ, ಗೋಕಾಕ್, ಕಾಗವಾಡ, ಹಿರೇಕೆರೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತೆರಳಬೇಕಿದ್ದ ಯತ್ನಾಳ್ ತಲೆ ಕೆಡಿಸಿಕೊಳ್ಳದೆ ಸುಮ್ಮನಿರುವುದು ತೀವ್ರ ಕುತೂಹಲ ಹುಟ್ಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *