#MeToo ಕೇಸ್ ಸೋಮವಾರಕ್ಕೆ ಮುಂದೂಡಿಕೆ- ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

Public TV
2 Min Read

ಬೆಂಗಳೂರು: ಶೃತಿ ಹರಿಹರನ್ ಮಾತಿಗೆ ಕಡಿವಾಣ ಹಾಕಬೇಕು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೆಯೋ ಹಾಲ್‍ನ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

ಶೃತಿ ಹರಿಹರನ್ ಮಾತಿಗೆ ಬ್ರೇಕ್ ಹಾಕಬೇಕು, ಅವರು ಮೀಡಿಯಾಗಳ ಮುಂದೆ ಹೋಗಿ ಅರ್ಜುನ್ ಸರ್ಜಾ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಬಾರದು ಅವರ ಹೇಳಿಕೆಗಳಿಗೆ ನಿರ್ಬಂಧ ಹಾಕುವಂತೆ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಮೇಯೋ ಹಾಲ್ ಕೋರ್ಟ್ ನಲ್ಲಿ ನಡೆಯಿತು.

ಈ ಬಗ್ಗೆ ವಿಸ್ತೃತವಾದ ವಾದವನ್ನು ಸರ್ಜಾ ಅವರ ವಕೀಲ ಶ್ಯಾಮ್ ಸುಂದರ್ ಕೋರ್ಟ್ ಗಮನಕ್ಕೆ ತಂದಿದ್ದರು. ಆದರೆ ಶೃತಿ ಅವರ ವಾದವನ್ನು ಕೇಳದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ತೀರ್ಮಾನಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ಶ್ಯಾಮ್ ಸುಂದರ್ ಮಾಧ್ಯಮಗಳಿಗೆ ಹೇಳಿದ್ದು ಹೀಗೆ:
ನನ್ನ ಕಕ್ಷೀದಾರರ ವಿರುದ್ಧ ಮಾಡಲಾಗಿದ್ದ ತೇಜೋವಧೆಯ ಬಗ್ಗೆ ಮಾನ್ಯ ನ್ಯಾಯಾಲಕ್ಕೆ ವಿಸ್ತೃತ ವರದಿಯನ್ನು ಗುರುವಾರವೇ ಮಂಡಿಸಿದ್ದೇವು. ಇದರ ವಿಚಾರಣೆಯನ್ನು ನಡೆಸಿದ್ದ ಕೋರ್ಟ್ ಇಂದು ಪರಿಶೀಲನೆ ನಡೆಸಿ, ಆರ್ಡರ್ ಪಾಸ್ ಮಾಡಲು ಸಹ ಮುಂದಾಗಿತ್ತು. ಆದರೆ ಶೃತಿ ಹರಿಹರನ್ ಪರ ವಕೀಲೆ ಎಂದು ಹೇಳಿಕೊಂಡ ಬಂದ ಜೈನಾ ಕೊಠಾರಿಯವರು ನಾವು ಸಹ ಈ ವಿಚಾರಣೆಯಲ್ಲಿ ವಕಲತ್ತು ವಹಿಸುತ್ತೇವೆ ಎಂದು ಕೋರ್ಟ್ ಬಳಿ ಮನವಿ ಮಾಡಿಕೊಂಡರು.

ಪ್ರಕರಣದ ಗಂಭೀರತೆಯನ್ನು ಅರಿತ ಅವರು ಏಕಾಏಕಿ ನೋಟಿಸ್ ಹಾಗೂ ಕೇವಿಯಟ್ ಸಲ್ಲಿಸದೇ, ನ್ಯಾಯಾಲಯ ತಮ್ಮ ಮನವಿಯನ್ನು ಕೇಳಿ ಎನ್ನುವ ಮೂಲಕ ನ್ಯಾಯಾಲಯದ ವಿಚಾರದಲ್ಲಿ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಲ್ಲದೇ ಅವರು ಶೃತಿ ಹರಿಹರನ್ ಅವರ ವಕೀಲೆ ಎನ್ನುವುದು ನಮಗೆ ತಿಳಿದಿಲ್ಲ. ಹೀಗಾಗಿ ಇದರ ತೀರ್ಪನ್ನು ಇಂದೇ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡೆವು.

ಪ್ರಕರಣದ ತೀವ್ರತೆಯನ್ನು ಅರಿತು ಅವರಾಗಿಯೇ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಅವರ ವಾದವನ್ನು ಕೇಳೋಣ. ನೈಸರ್ಗಿಕ ನ್ಯಾಯಾಲಯ ನಿಯಮದ ಪ್ರಕಾರ ಅವರ ವಾದಕ್ಕೂ ಮನ್ನಣೆ ನೀಡಿ, ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿತು. ಶೃತಿ ಅವರ ವಕೀಲೆಗೆ ನಿಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ, ನಿಮ್ಮ ವಾದವನ್ನು ಮಂಡಿಸಿ ಎಂದು ತಿಳಿಸಿತು.

ಇಂತಹ ಪ್ರಕರಣಗಳಲ್ಲಿ 90 ದಿನಗಳ ಕಾಲಾವಕಾಶ ಸಹ ಇರುತ್ತದೆ. ಆದರೆ ಕೋರ್ಟ್ ಸೋಮವಾರವೇ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಶೃತಿ ಪರ ವಕೀಲೆಗೆ ಸೂಚಿಸಿದೆ. ಸದ್ಯ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಶೃತಿಯವರು ನನ್ನ ಕಕ್ಷೀದಾರರ ವಿರುದ್ಧ ಫೇಸ್ಬುಕ್ ಸೇರಿದಂತೆ ಇತರೆ ಯಾವುದೇ ಮೂಲಗಳಿಂದ ತೇಜೋವಧೆ ಕೆಲಸಕ್ಕೆ ಕೈಹಾಕುವಂತಿಲ್ಲ. ಒಂದು ವೇಳೆ ಅವರು ಈ ರೀತಿ ಮಾಡಿದರೇ, ನಾವು ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಸಹ ದಾಖಲಿಸುತ್ತೇವೆ.

ಸೋಮವಾರ ಶೃತಿಯವರು ನ್ಯಾಯಾಲಯಕ್ಕೆ ಕಡ್ಡಾಯವಾಗಿ ಲಿಖಿತ ರೂಪದಲ್ಲಿ ಹೇಳಿಕೆಯನ್ನು ನೀಡಬೇಕು. ಮೌಖಿಕ ಹೇಳಿಕೆಯನ್ನು ಮಾನ್ಯ ನ್ಯಾಯಾಲಯ ಒಪ್ಪುವುದಿಲ್ಲ. ಅವರು ತಮ್ಮ ವಕೀಲೆ ಮೂಲಕವೇ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ನಾವು ಹಾಕಿರುವ ದೂರುಗಳ ಪ್ರತಿಯನ್ನು ಶೃತಿ ಪರ ವಕೀಲೆಗೆ ಕೋರ್ಟ್ ನೀಡುವಂತೆ ಸೂಚಿಸಿದ್ದರಿಂದ ನಾವು ಪ್ರತಿಯನ್ನು ಅವರಿಗೆ ತಲುಪಿಸಿದ್ದೇವೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=k1hMmFKYasQ

Share This Article
Leave a Comment

Leave a Reply

Your email address will not be published. Required fields are marked *