ನಾಪತ್ತೆಯಾಗಿದ್ದ ಬೆಂಗ್ಳೂರು ವಿದ್ಯಾರ್ಥಿ ಮಂಗ್ಳೂರಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆ

Public TV
1 Min Read

ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯೊಬ್ಬ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ವಿದ್ಯಾರ್ಥಿಯ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಬುಧವಾರ ಸಂಜೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಕೆರೆ ಬಳಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದರಿಂದ, ಬಾಲಕನ ಶವ ಪತ್ತೆಯಾಗಿದೆ.

ಘಟನೆ ವಿವರ?:
ಬೆಂಗಳೂರಿನ ಐಟಿಐ ವಿದ್ಯಾಮಂದಿರದ 9ನೇ ತರಗತಿ ವಿದ್ಯಾರ್ಥಿ ಯಶವಂತ್ ಸಾಯಿ ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದನು. ಬೆಂಗಳೂರಿನ ಹೂಡಿ ಮುನಿಸ್ವಾಮಿ ಶೆಟ್ಟಿ ಬಡಾವಣೆ ನಿವಾಸಿ ಎನ್.ವಿ. ಪ್ರೇಮಕುಮಾರ್ ಅವರ ಪುತ್ರನಾಗಿದ್ದು, ಮಂಗಳವಾರ ಯಶವಂತ್ ಅಜ್ಜ ಶಾಲೆಗೆ ಕಳುಹಿಸಲು ಕರೆ ತಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಮರಳಿದ್ದರು. ಆ ಬಳಿಕ ವಿದ್ಯಾರ್ಥಿ, ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಯಶವಂತ್ ಸಾಯಿ ನಾಪತ್ತೆಯಾಗಿರುವುದು ಗೊತ್ತಾಗುತ್ತಿದ್ದಂತೆ ಆತನ ಕುಟುಂಬದವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇತ್ತ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಗ್ರಾಮದ ಬಳಿ ಬುಧವಾರ ಸಂಜೆ ಶಾಲಾ ಬ್ಯಾಗ್, ಶಾಲಾ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರು ಈ ಬಗ್ಗೆ ಬೆಳ್ತಂಗಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿದಾಗ ಬಾಲಕನ ಶವ ಪತ್ತೆಯಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಮಾಡಿರುವ 372 ರೂಪಾಯಿಯ ಟಿಕೆಟ್ ಮತ್ತು ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಮಾಡಿರುವ 53 ರೂಪಾಯಿಯ ಟಿಕೆಟ್ ಕೂಡಾ ಬ್ಯಾಗಿನಲ್ಲಿ ಪತ್ತೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *