ತಾಯಿ ಮಡಿಲು ಸೇರಿತು ನಾಪತ್ತೆಯಾಗಿದ್ದ ನವಜಾತ ಶಿಶು

Public TV
1 Min Read

ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಅಪಹರಣಗೊಂಡಿದ್ದ ನವಜಾತ ಶಿಶು ಮತ್ತೆ ತಾಯಿಯ ಮಡಿಲು ಸೇರಿದೆ.

ಮುಳಬಾಗಲು ತಾಲ್ಲೂಕಿನ ವೆಮ್ಮಸಂದ್ರ ವೇಣು ಕುಮಾರಿ ಹಾಗೂ ನಾರಾಯಣಸ್ವಾಮಿ ಎಂಬುವವರ ನವಜಾತ ಹೆಣ್ಣು ಶಿಶು ಕೋಲಾರ ಜಿಲ್ಲಾ ಆಸ್ಪತ್ರೆಯಿಂದ ನಾಪತ್ತೆಯಾಗಿತ್ತು. ಕಳೆದ ಮೂರು ದಿನಗಳಿಂದ ಮಗು ಕಳೆದುಕೊಂಡು ತಾಯಿ ಹಾಗೂ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ನಾಪತ್ತೆಯಾದ ಮಗು ಅತ್ತಿಬೆಲೆ ಸರ್ಜಾಪುರ ರಸ್ತೆ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆಯಾಗಿದೆ.

ಏನಿದು ಘಟನೆ: ಜುಲೈ 11 ರಂದು ಜಿಲ್ಲಾಸ್ಪತ್ರೆಯಲ್ಲಿ ನವಜಾತ ಮಗು ನಾಪತ್ತೆಯಾಗಿತ್ತು. ಬಳಿಕ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ-ಸರ್ಜಾಪುರ ರಸ್ತೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಈ ಮಗುವನ್ನು ಶಿಶು ವಿಹಾರದಲ್ಲಿ ದಾಖಲಿಸಲಾಗಿತ್ತು. ಸದ್ಯ ಮಗು ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದ ತಾಯಿ ಹಾಗೂ ಪೋಷಕರು ಸದ್ಯ ಈ ಮಗು ನಮ್ಮದೆ ಎಂದು ಗುರುತಿಸಿದ್ದು, ಪೋಷಕರಿಗೆ ನಿಯಮಾನುಸಾರ ಮಗುವನ್ನ ಒಪ್ಪಿಸಲು ಶಿಶು ವಿಹಾರ ಕೇಂದ್ರದ ಅಧಿಕಾರಿಗಳು ಮುಂದಾಗಿದ್ದಾರೆ.

ಅನೇಕಲ್ ಪೊಲೀಸರು ಮಗುವನ್ನ ಶಿಶು ವಿಹಾರದಲ್ಲಿ ದಾಖಲಿಸಿದ್ದು, ನಿಯಮಗಳ ಅನುಸಾರ ಮಗುವನ್ನ ಪೋಷಕರಿಗೆ ಒಪ್ಪಿಸಬೇಕಾಗಿದೆ. ಆದರೆ ಮಗು ತಾಯಿ ಮಡಿಲು ಸೇರಲು ಇನ್ನೂ ನಾಲ್ಕು ದಿನ ಕಾಯಬೇಕಾಗಿದೆ. ಈ ವೇಳೆ ಪ್ರತಿಕ್ರಿಯೆ ನಿಡಿರುವ ಪೋಷಕರು ಮಗು ಸಿಕ್ಕಿರುವುದು ಖುಷಿ ತಂದಿದೆ, ಮಗು ಕಳೆದುಕೊಂಡ ಬಳಿಕ ಸಾಕಷ್ಟು ನೋವು ಅನುಭವಿಸಿದ್ದೇವೆ. ಆರಂಭದಲ್ಲಿ ಪೊಲೀಸರು ನಮ್ಮ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ನಮಗಾದ ನೋವು ಮತ್ಯಾರಿಗೂ ಬೇಡ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *