ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಶವ ನೀರಿನ ಟ್ಯಾಂಕ್‍ನಲ್ಲಿ ಪತ್ತೆ

Public TV
1 Min Read

ಬಾಗಲಕೋಟೆ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನೊಬ್ಬ ತೆರೆದ ನೀರು ಸರಬರಾಜು ಟ್ಯಾಂಕ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಜಮಖಂಡಿಯ ಚೌಡಯ್ಯನಗರದಲ್ಲಿ ಘಟನೆ ಬೆಳಕಿಗೆ ಬಂದಿದೆ. ವೆಂಕಟೇಶ ಲಕ್ಷ್ಮಯ್ಯಾ ವಿಭೂತಿ(12) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬಾಲಕ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದನು. ಕಳೆದ ಎರಡು ದಿನಗಳ ಹಿಂದೆ ಶಾಲೆಗೆ ಹೋಗಿದ್ದ ಬಾಲಕ ಮರಳಿ ಮನೆಗೆ ಬಂದಿರಲಿಲ್ಲ. ಆತನಿಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಕೂಡ ಆತನ ಸುಳಿವು ಸಿಕ್ಕಿರಲಿಲ್ಲ.

ಆದರೆ ಇಂದು ಬಾಲಕನ ಮೃತದೇಹ ನೀರಿನ ಟ್ಯಾಂಕ್‍ನಲ್ಲಿ ಪತ್ತೆಯಾಗಿದೆ. ಚೌಡಯ್ಯನಗರದಲ್ಲಿದ್ದ ನೀರು ಸರಬರಾಜು ಟ್ಯಾಂಕ್ ತೆರೆದ ಸ್ಥಿತಿಯಲ್ಲಿತ್ತು. ಇದನ್ನು ನೋಡಿದ ಸ್ಥಳೀಯರು ಟ್ಯಾಂಕಿನ ಬಳಿ ಹೋದಾಗ ಬಾಲಕನ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಸಾವಿಗೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಅವರು ಟ್ಯಾಂಕ್ ಬಾಗಿಲು ತೆರೆದಿಟ್ಟಿದ್ದಕ್ಕೆ ಬಾಲಕ ಅದರಲ್ಲಿ ಬಿದ್ದು, ಮುಳುಗಿ ಜೀವ ಕಳೆದುಕೊಂಡಿದ್ದಾನೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *