ಅಂಧ ಹುಡುಗಿಯ ಕತ್ತು ಸೀಳಿದ ದುಷ್ಕರ್ಮಿಗಳು

Public TV
1 Min Read

ಭುವನೇಶ್ವರ: ದುಷ್ಕರ್ಮಿಗಳು ಅಪ್ರಾಪ್ತ ಅಂಧ ಹುಡುಗಿಯ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ಮಂಗಳವಾರದಂದು ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ವರದಿಯಾಗಿದೆ.

ಇಲ್ಲಿನ ಅಂಧರ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿರುವ 16 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ ನಡೆದಿದೆ. ಸಂತ್ರಸ್ತೆ ಪುಹುಂಡಿ ಗ್ರಾಮದ ತನ್ನ ಮನೆಯ ಹಿಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಆಕೆಯ ತಾಯಿ ನೋಡಿದ್ದರು. ಕೂಡಲೇ ಆಕೆಯನ್ನು ಪತ್ರಾಪುರ್ ಕಮ್ಯೂನಿಟಿ ಹೆಲ್ತ್ ಸೆಂಟರ್‍ಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎಮ್‍ಕೆಜಿಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಸಂತ್ರಸ್ತೆಯ ಸ್ಥಿತಿ ಗಂಭಿರವಾಗಿದ್ದು, ಕುತ್ತಿಗೆ ಸೀಳಿದ್ದರಿಂದ ಆಕೆ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸಂತ್ರಸ್ತೆ ತನ್ನ ಸಹೋದರ ಹಾಗೂ ತಾಯಿಯೊಂದಿಗೆ ಮನೆಯಲ್ಲಿ ಮಲಗಿದ್ದರು. ಆದ್ರೆ ಬೆಳಗ್ಗೆ ವೇಳೆ ಆಕೆ ಕಾಣೆಯಾಗಿದ್ದರಿಂದ ತಾಯಿ ಹುಡುಕಾಟ ನಡೆಸಿದ್ದರು. ನಂತರ ಮನೆಯ ಹಿಂಬಾಗಿಲು ಲಾಕ್ ಆಗಿದ್ದು, ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ್ದರು. ಸಂತ್ರಸ್ತೆಯ ಮತ್ತೊಬ್ಬ ಸಹೋದರ ಹಾಗೂ ತಂದೆ ಹೊರರಾಜ್ಯದಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರ್ಹಾಮ್‍ಪುರ್ ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತ್ರಿನಾಥ್ ಪಟೇಲ್, ವೈಜ್ಞಾನಿಕ ಪೊಲೀಸ್ ತಂಡ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ಅಂಧ ಹುಡುಗಿಯನ್ನ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ್ದರೂ, ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ ನಂತರವಷ್ಟೇ ಖಚಿತವಾಗಬೇಕಿದೆ ಎಂದು ಪಟೇಲ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *