ದೆಹಲಿ ಗಲಭೆ – ಅತ್ತ ಪತ್ನಿಯ ಒಡವೆ ಕದ್ದೊಯ್ದರು, ಇತ್ತ 15 ಲಕ್ಷ ಖರ್ಚು ಮಾಡಿದ್ದ ಮನೆಗೇ ಬೆಂಕಿ ಇಟ್ಟರು

Public TV
1 Min Read

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಬಗೆದಷ್ಟು ಕಣ್ಣೀರ ಕಥೆಗಳು ಹೊರ ಬರುತ್ತಿವೆ. ಹಿಂಸಚಾರದ ವೇಳೆ ನಡೆದ ಅಗ್ನಿ ದುರಂತದಿಂದ ಹಲವು ಕುಟುಂಬಗಳು ಅಕ್ಷರ ಸಹ ಬೀದಿಗೆ ಬಂದಿದೆ. ಮನೆ ರಿನೋವೇಷನ್ ಮಾಡಿಸಿಕೊಂಡು ಮದುವೆಯಾಗಿದ್ದ ಶಿವ ವಿಹಾರ್ ನಗರದ ಅರುಣ್ ಮಿಶ್ರಾ ಕಥೆ ಇದಕ್ಕೆ ಹೊರತಾಗಿಲ್ಲ.

ಉತ್ತರ ಪ್ರದೇಶ ಮೂಲದ ಅರುಣ್ ಮಿಶ್ರಾ ಕಳೆದ 14 ವರ್ಷಗಳಿಂದ ಈಶಾನ್ಯ ದೆಹಲಿ ಶಿವ್ ವಿಹಾರ್ ನಲ್ಲಿ ವಾಸ ಮಾಡುತ್ತಿದ್ದಾರೆ. ಕಳೆದ ವಾರ ನಡೆದ ಬೆಂಕಿ ಅನಾಹುತದಲ್ಲಿ ಅರುಣ್ ಮಿಶ್ರಾರ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಅಲ್ಲದೇ ಇತ್ತೀಚೆಗೆ ಅರುಣ್ ಅವರ ಮದುವೆಯಾಗಿತ್ತು, ಆದರೆ ಬೆಂಕಿ ಅನಾಹುತದ ಮೊದಲು ಅರಣ್ ಅವರ ಪತ್ನಿಯ ಒಡೆವೆಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.

ಗಲಭೆ ವೇಳೆ ಪ್ರಾಣ ಭೀತಿಯಲ್ಲಿ ಮನೆಗೆ ಬೀಗ ಹಾಕಿ ಶಿವ ವಿಹಾರ್ ನಿಂದ ಸಂಬಂಧಿಕರ ಮನೆಗೆ ಅರುಣ್ ಕುಟುಂಬ ತೆರಳಿ ನೆರವು ಪಡೆದುಕೊಂಡಿತ್ತು. ಗಲಭೆಯ ಮೊದಲ ದಿನ ಅರುಣ್ ಮನೆಯನ್ನು ಸಂಪೂರ್ಣ ದೋಚಲಾಗಿದೆ. ಮನೆಗೆ ಹಾಕಿದ್ದ ಬೀಗ ಒಡೆದು ಒಳ ನುಗ್ಗಿರುವ ದುಷ್ಕರ್ಮಿಗಳು ಮನೆಯ ಬೀರುವಿನಲ್ಲಿದ್ದ ಒಡವೆಗಳನ್ನು ದೋಚಿದ್ದಾರೆ. ಅರುಣ್ ಮಾರನೇ ದಿನ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿದ್ದು ಬೆಳಕಿಗೆ ಬಂದಿದ್ದು, ಒಡವೆ ಹೋದರೆ ಹೋಗಲಿ ಮನೆ ಉಳಿತಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ವಾಪಸ್ ಬರುವ ಪ್ಲಾನ್ ಮಾಡಿಕೊಂಡು ಮತ್ತೆ ಸಂಬಂಧಿಕರ ಮನೆಗೆ ಅರುಣ್ ತೆರಳಿದ್ದರು.

ಎರಡನೇ ದಿನದ ಘರ್ಷಣೆ ವೇಳೆ ದುಷ್ಕರ್ಮಿಗಳು ಅರುಣ್ ಮನೆಗೆ ಬೆಂಕಿ ಹಚ್ಚಿದ್ದು, ಎರಡು ಅಂತಸ್ತಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಇತ್ತೀಚೆಗೆ ಅರುಣ್ 15 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ತಮ್ಮ ಹಳೆ ಮನೆಯನ್ನು ರಿನೋವೇಷನ್ ಮಾಡಿಸಿಕೊಂಡು ಮದುವೆಯಾಗಿದ್ದರು. ಘಟನೆಯಲ್ಲಿ ಪತ್ನಿಯ ಒಡವೆ ಮತ್ತು ಮನೆ ಎರಡನ್ನೂ ಕಳೆದುಕೊಂಡು ಅರುಣ್ ಕುಟುಂಬ ಈಗ ಬೀದಿಗೆ ಬಂದಿದ್ದು ಕಣ್ಣಿರಿಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *