ಕಾರ್ಕಳದಲ್ಲಿ ಹಸಿರು ಬಾವುಟ ಕಿತ್ತು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ- ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Public TV
1 Min Read

ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗಿದೆ. ಹಸಿರು ಬಾವುಟವನ್ನು ಕಿತ್ತು ವ್ಯಕ್ತಿಗೆ ಹಲ್ಲೆ ಹಾಗೂ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಲ್ಲೆಗೊಳಗಾದವರನ್ನು ಶೇಖ್ ಮೊಹಸಿನ್ ಹಾಗೂ ಮಹಮ್ಮದ್ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಾವಿರಾರು ಮುಸ್ಲಿಮರು ಜಮಾಯಿಸಿ ಘಟನೆಯನ್ನು ಖಂಡಿಸಿದ್ದಾರೆ.

ಏನಿದು ಘಟನೆ?: ಗುರುವಾರ ರಾತ್ರಿ ಕಾರ್ಕಳ ಹೊರವಲಯದ ಬಂಗ್ಲೆಗುಡ್ಡೆಯಲ್ಲಿ ದುಷ್ಕರ್ಮಿಗಳು ಹಸಿರು ಬಾವುಟ ಕೆಡವಿ ಶೇಖ್ ಮೊಹಸಿನ್ ಎಂಬವರ ಮೇಲೆ ಮನಬಂದಂತೆ ಸೋಡಾ ಬಾಟಲಿ ಎಸೆದು, ತಲ್ವಾರ್ ಮತ್ತು ಇತರೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಭಜರಂಗದಳದ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಹಲ್ಲೆಗೊಳಗಾದ ಶೇಖ್ ಮೊಹಸಿನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಮಹಮ್ಮದ್ ಎಂಬವರ ಮೇಲೆಯೂ ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಹಲ್ಲೆಗೊಳಗಾದ ವ್ಯಕ್ತಿಯ ಕಡೆಯಿಂದ ಕಾರ್ ನಂಬರ್ ಸಹಿತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಕಾರ್ ನಂಬರ್ ಪರಿಶೀಲಿಸಿದಾಗ ಅದು ಭಜರಂಗದಳದ ಮಹೇಶ್ ಶೆಣೈ ಕಾರ್ ಎಂಬುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮಹೇಶ್ ಶೆಣೈ, ಗಣೇಶ್ ಪೂಜಾರಿ ಮತ್ತು ಇತರೆ ಮೂವರ ವಿರುದ್ಧ ಕೇಸ್ ದಾಖಲಾಗಿದೆ.

ಆದ್ರೆ ಬರೀ ಕೇಸ್ ಹಾಕಿದ್ರೆ ಸಾಲದು ಬಂಧಿಸಬೇಕು. ಶಿಕ್ಷೆಗೆ ಒಳಪಡಿಸಬೇಕು ಎಂದು ಮುಸ್ಲಿಮರು ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದ್ದಾರೆ. ಆದ್ರೆ ಇತ್ತ ಮಹೇಶ್ ಶೆಣೈ, ತನ್ನ ಕಾರ್ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.

https://www.youtube.com/watch?v=0oezUYrEqQI

 

Share This Article
Leave a Comment

Leave a Reply

Your email address will not be published. Required fields are marked *