ಲಕ್ನೋ: ರೀಲ್ಸ್ ಮಾಡಲು ಐಫೋನ್ಗಾಗಿ ಬೆಂಗಳೂರು (Bengaluru) ಯುವಕನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರು ಮೂಲದ ಶಾದಾಬ್ (19) ಎಂದು ಗುರುತಿಸಲಾಗಿದೆ. ಮಾವನ ಮದುವೆಗಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡೋದು, ಲೈಕ್ಸ್ ಪಡೆಯೋದು ಟ್ರೆಂಡ್ ಆಗಿಬಿಟ್ಟಿದೆ. ಇದೀಗ ರೀಲ್ಸ್ ಮಾಡೋಕೆ ಐಫೋನ್ಗಾಗಿ ಒಂದು ಕೊಲೆಯೇ ನಡೆದುಬಿಟ್ಟಿದೆ. ಹೌದು. ಉತ್ತರ ಪ್ರದೇಶದ ಇಬ್ಬರು ಅಪ್ರಾಪ್ತರಿಗೆ ರೀಲ್ಸ್ ಮಾಡೋದಕ್ಕೆ ಐಫೋನ್ ಬೇಕಿತ್ತು. ಇದೇ ವೇಳೆ ಮೃತ ಯುವಕ ತಮ್ಮ ಮಾವನ ಮದುವೆಗಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದ. ಯುವಕನ ಬಳಿ ಐಫೋನ್ ಇರೋದನ್ನ ಕಂಡ ಅಪ್ರಾಪ್ತರು ಕೊಲೆಗೆ ಸಂಚು ರೂಪಿಸಿದ್ರು.
ಕೊಲೆ ನಡೆದಿದ್ದು ಹೇಗೆ?
ಮಾವನ ಮದುವೆಗಾಗಿ ಬೆಂಗಳೂರು ಮೂಲದ ಶಾದಾಬ್ ಬಹ್ರೈಚ್ಗೆ ಬಂದಿದ್ದ. ಆತನ ಬಳಿ ಐಫೋನ್ ಇರೋದನ್ನ ಕಂಡ ಅಪ್ರಾಪ್ತರು. ಮಾರನೇ ದಿನ ಮೃತ ಶಾಬಾದ್ನನ್ನ ವಿಡಿಯೋ ಶೂಟ್ ಮಾಡ್ಬೇಕು ಅಂತ ಹೇಳಿ, ಗ್ರಾಮದ ಹೊರಗಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಅಲ್ಲೇ ಅವನ ಮೇಲೆ ದಾಳಿ ನಡೆಸಿದ್ದಾರೆ. ಕತ್ತು ಸೀಳಿ, ಬಳಿಕ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಅಪ್ರಾಪ್ತರ ಸಂಬಂಧಿಕರು ಚಾಕು ಮುಚ್ಚಿಡಲು ಸಹಾಯ ಮಾಡಿ, ನಾಲ್ವರು ಪರಾರಿಯಾಗಿದ್ದಾರೆ.
ಜೂ.20ರಂದು ಕೊಳವೆ ಬಾವಿಯ ಬಳಿ ಆತನ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಇಬ್ಬರು ಅಪ್ರಾಪ್ತರು ಹಾಗೂ ಅವರ ಸಂಬಂಧಿಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಇಬ್ಬರು ಅಪ್ರಾಪ್ತರು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮೃತ ಯುವಕ ಊರಿಗೆ ಬಂದಾಗ ಆತನ ಬಳಿಯಿರುವ ಐಫೋನ್ ನೋಡಿ, ನಾಲ್ಕು ದಿನಗಳ ಹಿಂದೆಯೇ ಕೊಲೆಗೆ ಸಂಚು ಹಾಕಿರುವುದಾಗಿ ತಿಳಿಸಿದ್ದಾರೆ. ಇಬ್ಬರಿಂದ ಐಫೋನ್, ಕೊಲೆಗೆ ಬಳಸಿದ ಚಾಕು ಹಾಗೂ ಇಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಇನ್ನೋರ್ವನಿಗಾಗಿ ಹುಡುಕಾಟ ನಡೆಸಿದ್ದು, ನಾಲ್ವರ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಅಪ್ರಾಪ್ತರನ್ನು ಬಾಲಾಪರಾಧಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಓರ್ವ ಸಂಬಂಧಿಯನ್ನ ಜೈಲಿಗೆ ಕಳುಹಿಸಲಾಗಿದೆ.ಇದನ್ನೂ ಓದಿ: ಮೂರು ಮೆಗಾ ಪ್ರಾಜೆಕ್ಟ್ ಒಪ್ಪಿದ ಧ್ರುವ ಸರ್ಜಾ