ಟ್ಯೂಷನ್ ಶಿಕ್ಷಕಿಯಿಂದಲೇ ಅಪ್ರಾಪ್ತ ಬಾಲಕಿಯ ಅಪಹರಣ

Public TV
1 Min Read

ಮಂಡ್ಯ: ಟ್ಯೂಷನ್ ಮಾಡುತ್ತಿದ್ದ ಶಿಕ್ಷಕಿಯೇ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿರುವ ಘಟನೆ ಜಿಲ್ಲೆಯ ಕೀಲಾರ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಿ ಮತ್ತು ವಿಜಿ ದಂಪತಿಯ ಪುತ್ರಿಯಾದ 13 ವರ್ಷದ ಮಹಾಲಕ್ಷ್ಮಿ ಕಿಡ್ನಾಪ್ ಆಗಿರೋ ಬಾಲಕಿ. ಈ ದಂಪತಿ ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದು, ತಮ್ಮ ಮಗಳನ್ನು ಅಜ್ಜಿ ಮನೆಯಲ್ಲಿ ಬಿಟ್ಟು ಓದಿಸುತ್ತಿದ್ದರು. ಇದೀಗ ಟ್ಯೂಷನ್ ಮಾಡುತ್ತಿದ್ದ ಪೂಜಾ ಎಂಬ ಶಿಕ್ಷಕಿಯೇ ಬಾಲಕಿಯನ್ನ ಅಪಹರಿಸಿದ್ದಾಳೆ.

20 ದಿನಗಳ ಹಿಂದೆ ಕೀಲಾರ ಗ್ರಾಮಕ್ಕೆ ಆಗಮಿಸಿದ್ದ ಪೂಜಾ, ತನ್ನ ಗಂಡ ಯೋಗೇಶ್ ಮತ್ತು ಸುನೀಲ್ ಎಂಬ ಯುವಕನೊಂದಿಗೆ ಬಾಡಿಗೆ ಮನೆ ಪಡೆದು ವಾಸವಿದ್ದಳು. ಮಹಾಲಕ್ಷ್ಮಿ ಎಂಟನೇ ತರಗತಿ ಓದುತ್ತಿದ್ದು, ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದ ಪೂಜಾ ಬಳಿ ಟ್ಯೂಷನ್‍ಗೆ ಹೋಗುತ್ತಿದ್ದಳು. ಕಳೆದ ನವೆಂಬರ್ 19 ರಂದು ಮಹಾಲಕ್ಷ್ಮಿಯನ್ನು ತನ್ನ ಜೊತೆ ಕರೆದುಕೊಂಡು ಹೋದ ಪೂಜಾ ನಾಪತ್ತೆಯಾಗಿದ್ದಾಳೆ.

ಪೂಜಾಳ ಜೊತೆ ಆಕೆಯ ಗಂಡ ಯೋಗೇಶ್ ಮತ್ತು ಸುನೀಲ್‍ಕುಮಾರ್ ಕೂಡ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡ ಬಾಲಕಿಯ ಪೋಷಕರು ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹೇಗಾದರೂ ಮಾಡಿ ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *