ಬಲವಂತದ ಮದುವೆಗೆ ಅಪ್ರಾಪ್ತೆ ಸಿನಿಮೀಯ ರೀತಿ ಅಪಹರಣ – ಮೂವರು ಅರೆಸ್ಟ್

Public TV
2 Min Read

ಚಿಕ್ಕಮಗಳೂರು: ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಕ್ಕೆ ಅಪ್ರಾಪ್ತೆಯನ್ನು ಸಿನಿಮೀಯ ರೀತಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮರಡಿಹಳ್ಳಿಲ್ಲಿ ನಡೆದಿದೆ.

ಅಪಹರಣಕಾರರನ್ನು ಮರಡಿಹಳ್ಳಿಯ ಮಲ್ಲೇಶ್, ಎಸ್.ಜಿ.ಕೊಪ್ಪಲಿನ ಪರಮೇಶ್, ಕುರುಬಗೆರೆ ಮಹಾಂತೇಶ್ ಎಂದು ಗುರುತಿಸಲಾಗಿದ್ದು, ಮೂವರು ಅಪಹರಣಕಾರರನ್ನು ಬಂಧಿಸುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾದ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಲೆ ಏರಿಕೆಯ ಬಿಸಿ – ಯಾವ ವಸ್ತುಗಳು ಎಷ್ಟು ಏರಿಕೆ?

ಡಿಸೆಂಬರ್ 27ರ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಮರಡಿಹಳ್ಳಿ ವಾಸಿ ಓಂಕಾರಪ್ಪ ಹಾಗೂ ಅವರ ಪತ್ನಿ ಅಮ್ಮಯ್ಯ ತಮ್ಮ 17 ವರ್ಷದ ಮಗಳೊಂದಿಗೆ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕುಂಬಳಕಾಯಿ ಹೂವಿಗೆ ಪರಾಗಸ್ಪರ್ಶ ಮಾಡಲು ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮರಡಿಹಳ್ಳಿ ಮತ್ತು ಕಡೂರಹಳ್ಳಿಯ ಮುಖ್ಯ ರಸ್ತೆಯಲ್ಲಿ ಬೊಲೆರೋ ವಾಹನದಲ್ಲಿ ಹಿಂದಿನಿಂದ ಬಂದು ಓಂಕಾರಪ್ಪ ಮತ್ತು ಅಮ್ಮಯ್ಯ ಅವರಿಗೆ ವಾಹನದಲ್ಲಿದ್ದ ವ್ಯಕ್ತಿಗಳು ಥಳಿಸಿ ಅವರ ಮಗಳನ್ನು ಅಪಹರಿಸಿದ್ದರು.

ವಾಹನದಲ್ಲಿ ಗೋವಿಂದಪ್ಪ, ಪರಮೇಶ್, ಸಣ್ಣೆಗೌಡ ಇದ್ದರೆಂದು ಓಂಕಾರಪ್ಪ ಗುರುತು ಹಿಡಿದಿದ್ದು ಈ ಅಪಹರಣ ಸಂದರ್ಭದಲ್ಲಿ ಅಲ್ಲೇ ಹೊಲದಲ್ಲಿ ಅಡಗಿ ಕುಳಿತಿದ್ದ ಮತ್ತೆ ಮೂರ್ನಾಲ್ಕು ಜನ ಅಪಹರಣಕಾರರೊಂದಿಗೆ ಕೈಜೋಡಿಸಿದ್ದಾರೆ. ನನಗೆ ಹಾಗೂ ನನ್ನ ಪತ್ನಿಯ ಕೈಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಈ ಘಟನೆಯಲ್ಲಿ ಗ್ರಾಮದ ಮಲ್ಲೇಶ್ ಹಾಗೂ ಮಾರುತಿ ಅವರ ಕೈವಾಡವಿದೆ ಎಂದು ಓಂಕಾರಪ್ಪ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ವಿವರಿಸಿದ್ದರು.  ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

ಓಂಕಾರಪ್ಪ ದೂರು ನೀಡಿದ ಕೂಡಲೇ ಕಾರ್ಯ ಪ್ರವೃತ್ತರಾದ ಕಡೂರು ಪೊಲೀಸರು ಬಂಧಿತ ಆರೋಪಿ ಮಹಾಂತೇಶ್ ಸಂಬಂಧಿ ಕಡೂರು ತಾಲೂಕಿನ ಎಮ್ಮೆದೊಡ್ಡಿ ಭಾಗದ ಸಗಣಿಬಸವನಹಳ್ಳಿ ಗ್ರಾಮದ ಗುರುಸ್ವಾಮಿ ಎಂಬುವರ ಮನೆಯಲ್ಲಿ ಯುವತಿಯನ್ನು ಪತ್ತೆ ಮಾಡಿದ್ದಾರೆ. ಅಪಹರಣಕ್ಕೊಳಗಾದ ಯುವತಿಯನ್ನು ರಕ್ಷಿಸಿರುವ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಪೋಷಕರಿಗೆ ಒಪ್ಪಿಸಲಾಗಿದೆ.

ಬಂಧಿತರಲ್ಲಿ ಓರ್ವನಾದ ಪರಮೇಶ್ ಕೆಲವು ತಿಂಗಳ ಹಿಂದೆ ಯುವತಿಯನ್ನು ಮದುವೆ ಮಾಡಿಕೊಡಿ ಎಂದು ಯುವತಿಯ ತಂದೆ ಓಂಕಾರಪ್ಪನವರಿಗೆ ಪ್ರಸ್ತಾಪಿದ್ದರು. ಆದರೆ, ಓಂಕಾರಪ್ಪ ಪರಮೇಶ್ ಅವರ ಆಹ್ವಾನವನ್ನು ತಿರಸ್ಕರಿಸಿದ್ದರಿಂದ ಮನನೊಂದ ಪರಮೇಶ್ ಯುವತಿಯನ್ನು ಅಪಹರಿಸಲಾಗಿದೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಂದಿದೆ. ಆರೋಪಿಗಳನ್ನು ಬಂಧಿಸಿರುವ ಕಡೂರು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *