ವಿದೇಶಗಳಲ್ಲಿರೋ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆ ಆರಂಭ: ಸುರೇಶ್ ಕುಮಾರ್

Public TV
2 Min Read

– ಮೊದಲ ಹಂತದಲ್ಲಿ 6,100 ಜನ ವಾಪಸ್

ಬೆಂಗಳೂರು: ಲಾಕ್‍ಡೌನ್ ನಿಂದಾಗಿ ವಿದೇಶಗಳಲ್ಲಿರುವ ಸಿಲುಕಿರೋ ಕನ್ನಡಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೊರದೇಶಗಳಲ್ಲಿರುವ ಭಾರತೀಯರನ್ನು ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಿದೇಶಗಳಲ್ಲಿ 10,823 ಜನ ಕರ್ನಾಟಕದವರು ಇದ್ದಾರೆ. ಮೊದಲ ಹಂತದಲ್ಲಿ 6,100 ಜನ ವಿದೇಶದಿಂದ ವಾಪಸ್ ಆಗಲಿದ್ದಾರೆ. ಸೌದಿ ಅರೇಬಿಯ, ಕೆನಡಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಕನ್ನಡಿಗರಿದ್ದಾರೆ. ಎಲ್ಲರನ್ನು ಕರೆ ತರಲು ಸರ್ಕಾರ ಮುಂದಾಗಿದ್ದು, ವಾಪಸ್ ಬಂದವರನ್ನು ಕ್ವಾರಂಟೈನ್ ನಲ್ಲಿರಿಸಿ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ ಎಂದು ಸಚಿವರು ಹೇಳಿದರು.

ಹೊರದೇಶಗಳಲ್ಲಿ ದುಸ್ಥಿತಿಯಲ್ಲಿರುವ 10,823 ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಸಮನ್ವಯ ಕಾರ್ಯದ ನಿರ್ದೇಶನ ನೀಡಿದೆ ಎಂದು ಸಚಿವರು ಹೇಳಿದರು. ಈ ಪೈಕಿ 4408 ಪ್ರವಾಸಿಗರು, 3074 ವಿದ್ಯಾರ್ಥಿಗಳು, 2284 ವೃತ್ತಿಪರ ಕೆಲಸ ಮಾಡುವವರೂ ಇದ್ದಾರೆ ಎಂದು ಸಚಿವರು ವಿವರಿಸಿದರು. ಪ್ರಧಾನವಾಗಿ ಕೆನಡಾ (328), ಅಮೆರಿಕಾ (927) , ಅರಬ್ ದೇಶಗಳಿಂದ ಹಿಂತಿರುಗುತ್ತಿರುವ ವ್ಯಕ್ತಿಗಳನ್ನು ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್ ಮಾಡಿ ಅವರ ದೇಹ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಅವಶ್ಯಕ ಶುಶ್ರೂಶೆ ಒದಗಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕೋವಿಡ್ ಬೆಳವಣಿಗೆ ಗತಿ ಶೇ.1.25: ಕಳೆದ ಐದು ದಿನಗಳಲ್ಲಿ 60 ಪ್ರಕರಣಗಳು ಖಚಿತಗೊಂಡಿದ್ದು, 64 ಪ್ರತ್ಯೇಕ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಹಿಂತಿರುಗಿದ್ದಾರೆಂಬ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಕೋವಿಡ್ ಬೆಳವಣಿಗೆಯ ಗತಿ ಶೇ.1.25 ರಷ್ಟಿದೆ ಎಂದರು.

ಸರ್ಕಾರಿ ನೌಕರರಿಗೆ ಉಚಿತ ತಪಾಸಣೆ: ಬೆಂಗಳೂರು ನಗರದಲ್ಲಿ ಕೋವಿಡ್ ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಸರ್ಕಾರಿ ನೌಕರರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇಂದಿನಿಂದ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಪಾಸಣಾ ಅಭಿಯಾನವು ಪ್ರಾರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಅದೇ ರೀತಿ ಗುಣಮುಖರಾಗಿ ಹಿಂತಿರುಗಿರುವ ವ್ಯಕ್ತಿಗಳಿಗೆ ನಂತರದ ದಿನಗಳಲ್ಲಿ ಕ್ವಾರಂಟೈನ್ ಅನ್ನು ಯಾವ ರೀತಿಯಲ್ಲಿ ಅನುಸರಿಸಬೇಕೆಂಬ ಬಗ್ಗೆ ಸಹ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯದ ಆರೋಗ್ಯ ಇಲಾಖೆ ಹೊರಡಿಸಿದೆ ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *