ತಹಶೀಲ್ದಾರ್ ಪ್ರಶ್ನೆಯಿಂದ ಕೆರಳಿದ ಸೋಮಣ್ಣ – ಅಧಿಕಾರಿಗಳಿಗೆ ಕ್ಲಾಸ್

Public TV
1 Min Read

– ಎಲ್ಲ ಮನೆಗಳಿಗೂ ವಿದ್ಯುತ್ ಪೂರೈಕೆಯಾಗ್ಬೇಕು

ಮೈಸೂರು: ಸಚಿವ ಸೋಮಣ್ಣ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಭಿವೃದ್ಧಿ ಕುರಿತು ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ಮಾಡುತ್ತಿದ್ದರು. ಈ ವೇಳೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳಿಗೆ ಸೋಮಣ್ಣ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.

ಕಾರಾಪುರ ಜಂಗಲ್ ಲಾಡ್ಜ್ ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಈ ವೇಳೆ ಸಭೆಗೆ ಸೋಮಣ್ಣ ಪ್ರತಿಯೊಂದು ಇಲಾಖೆಯಲ್ಲೂ ಸರಿಯಾಗಿ ಕೆಲಸ ನಡೆಯುತ್ತಿದೆಯಾ ಎಂದು ವಿಚಾರಿಸುತ್ತಿದ್ದರು. ಆಗ ತಹಶೀಲ್ದಾರ್, ಸಭೆಗೆ ನಾನು ಬರಬೇಕಾ ಎಂದು ಕೇಳಿದ್ದಾರೆ. ತಹಶೀಲ್ದಾರ್ ಪ್ರಶ್ನೆಯಿಂದ ಕೆರಳಿದ ಸೋಮಣ್ಣ ತಾಲೂಕು ತಹಶೀಲ್ದಾರ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಏನ್ರಿ ತಾಲೂಕು ಅಭಿವೃದ್ಧಿ ಬಗ್ಗೆ ಸಭೆ ಕರೆದಿರುವುದು ಹುಡುಗಾಟಕ್ಕಾ. ಮೊದಲು ತಹಶೀಲ್ದಾರ್ ಪದವಿಯ ಅರ್ಥ ತಿಳಿದುಕೊಳ್ಳಿ. ಇದು ಕಾಟಾಚಾರಕ್ಕೆ ಮಾಡುತ್ತಿರುವ ಸಭೆಯಲ್ಲ. ಹಿಂದುಳಿದ ಕೋಟೆ ತಾಲೂಕಿಗೆ ಏನಾದರೂ ಮಾಡೋಣ ಎಂದು ಸಭೆ ಕರೆದರೆ ನಿಮಗೆ ಕಾಳಜಿ ಇಲ್ಲ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಇದೆಲ್ಲ ನನ್ನ ಮುಂದೆ ನಡೆಯಲ್ಲ. ಎಲ್ಲ ಇಲಾಖೆಯಲ್ಲೂ ಯಾವುದೇ ತೊಂದರೆ ಇಲ್ಲದೆ ಸರಿಯಾಗಿ ಕೆಲಸ ನಡೆಯಬೇಕು. ರಸ್ತೆಗೆ ಉತ್ತಮವಾದ ಡಾಂಬರ್ ಹಾಕಿ. ಎಲ್ಲ ಮನೆಗಳಿಗೂ ಸರಿಯಾಗಿ ವಿದ್ಯುತ್ ಪೂರೈಕೆ ಆಗಬೇಕು. ಮನೆಗಳ ರಿಪೇರಿ ಇದ್ದರೆ ಕೂಡಲೇ ಮಾಡಿಸಿ. ಹಣ ಎಷ್ಟಾಗುತ್ತೋ ನಾನು ಕೊಡಿಸ್ತೀನಿ ಎಂದು ತಾಲೂಕು ಮಟ್ಟದ ಅಧಿಕಾರಿ ಸಮೂಹಕ್ಕೆ ಸೋಮಣ್ಣ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

https://www.youtube.com/watch?v=VMghqE-43e0

Share This Article
Leave a Comment

Leave a Reply

Your email address will not be published. Required fields are marked *