ಸಿಪಿಐ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ- ಮಗ ತಪ್ಪು ಮಾಡಿದ್ರೆ ಶಿಕ್ಷೆ ನೀಡಿ ಅಂದ್ರು ರೇವಣ್ಣ

Public TV
2 Min Read

ಹಾಸನ: ಚನ್ನರಾಯಪಟ್ಟಣ ಗ್ರಾಮಾಂತರ ಸಿಪಿಐ ಹರೀಶ್ ಬಾಬು ವರ್ಗಾವಣೆ ವಿಚಾರದಲ್ಲಿ ನಾನು ಪ್ರಭಾವ ಬೀರಿಲ್ಲ ಅಂತ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಖಡಕ್ ಆಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಗರಂ ಆದ ಅವರು, ನಾನು ಯಾರ ಮೇಲೂ ಪ್ರಭಾವ ಬೀರಲು ಹೋಗಿಲ್ಲ. ಚನ್ನರಾಯಪಟ್ಟಣ ಸಿಪಿಐ ವರ್ಗಾವಣೆ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ. ಆ ಬಗ್ಗೆ ಎಸ್ಪಿ ಹಾಗೂ ಆ ಇನ್ಸ್ ಪೆಕ್ಟರ್ ಅವರನ್ನೇ ಕೇಳಿ. ಈ ಬಗ್ಗೆ ಬೇಕಿದ್ದರೆ ತನಿಖೆ ನಡೆಸಲಿ. ತಪ್ಪು ಮಾಡಿದ್ರೆ ರೇವಣ್ಣ ಆದ್ರೇನು ಅವರ ಮಗನಾದ್ರೇನು ಎಂದು ಕಿಡಿಕಾರಿದ್ರು.

ಆ ಇನ್ಸ್ ಪೆಕ್ಟರ್ ಜೆಡಿಎಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕ್ತಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕೋದಿಲ್ಲ. ನನ್ನ ಮಗ ಡಾ. ಸೂರಜ್ ಆ ಗಲಾಟೆಯಲ್ಲಿ ಇದ್ನಾ ಎಂದು ಪ್ರಶ್ನೆ ಮಾಡಿದ್ರು. ವಿನಾಕಾರಣ ಎಫ್.ಐ.ಆರ್ ಹಾಕಿದ್ದಾರೆ. ಆ ಇನ್ಸ್ ಪೆಕ್ಟರ್ ನ್ನು ಅಮಾನತು ಮಾಡಲು ಜಿಲ್ಲಾಧಿಕಾರಿ ಹೊರಟಿದ್ದರು. ಆವಾಗ ನಾನೇ ಬೇಡ ಎಂದಿದ್ದೆ. ನನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಅಂದ್ರು. ಇದನ್ನೂ ಓದಿ: ರೇವಣ್ಣ ಪುತ್ರನ ವಿರುದ್ಧ ದೂರು ದಾಖಲಿಸಿದ್ದಕ್ಕೆ ಚನ್ನರಾಯಪಟ್ಟಣ ಇನ್ಸ್ ಪೆಕ್ಟರ್ ಗೆ ಕಿರುಕುಳ?

ಹಾಸನ-ಬೇಲೂರು ರೈಲು ಮಾರ್ಗ ಸರ್ವೇ ಕಾರ್ಯ ಶೀಘ್ರ ಆರಂಭವಾಗಲಿದೆ. ರಾಜ್ಯದ ಶೇ.50 ರಷ್ಟು ಸಹಭಾಗಿತ್ವದಲ್ಲಿ ಯೋಜನೆ ಆರಂಭವಾಗಲಿದೆ. ಬೇಲೂರು-ಚಿಕ್ಕಮಗಳೂರು ನಡುವಿನ ಕಾಮಗಾರಿಗೆ ಭೂಸ್ವಾಧೀನ ಆಗಿಲ್ಲ. ಈ ಸಂಬಂಧ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಹಾಸನ ಮಾರ್ಗವಾಗಿ ಎಕ್ಸ್ ಪ್ರೆಸ್ ಸೇರಿ ಇನ್ನೂ ಹೆಚ್ಚಿನ ರೈಲು ಓಡಿಸಲು ಮನವಿ ಮಾಡಲಾಗಿದೆ. ಬಹು ನಿರೀಕ್ಷಿತ ರೈಲ್ವೆ ಮೇಲ್ಸೇತುವೆ ಯೋಜನೆ ಮುಂದಿನ ಸಂಪುಟದ ಮುಂದೆ ಬರಲಿದೆ. ಕಾಮಗಾರಿಗೆ ಶೀಘ್ರ ಅನುಮೋದನೆ ಸಿಗಲಿದೆ ಅಂತ ಅವರು ತಿಳಿಸಿದ್ರು.

ಮಾಧ್ಯಮಕ್ಕೆ ಶಾಪ:
ಇದೇ ವೇಳೆ ಮಾಧ್ಯಮದ ವಿರುದ್ಧ ಕಿಡಿಕಾರಿದ ರೇವಣ್ಣ, ವಾರ ಪತ್ರಿಕೆವೂಂದರಲ್ಲಿ ಐದು ಬಾರಿ ನನ್ನ ಬಗ್ಗೆ ಬರೆದಿದ್ದಾರೆ. ನಾನು ಐದು ಬಾರಿ ಶಾಸಕನಾದೆ. ಟಿವಿ ಮಾಧ್ಯಮಗಳು ನನ್ನ ಬಗ್ಗೆ ದಿನಾ ತೋರಿಸಲಿ. ನಮಗೆ ದೇವರ ಹಾಗು ಜನರ ಆಶೀರ್ವಾದ ಇದೆ. ನಿಮಗೆಲ್ಲಾ ದೇವರೇ ಶಿಕ್ಷೆಕೊಡ್ತಾನೆ ಎಂದು ಮಾಧ್ಯಮ ವಿರುದ್ಧ ಶಾಪ ಹಾಕಿದ್ರು.

 

Share This Article
Leave a Comment

Leave a Reply

Your email address will not be published. Required fields are marked *