ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿಯ ಹಿರೇಮಠದ ಶಿವಪ್ರಕಾಶ ಸ್ವಾಮೀಜಿ ಒಬ್ಬ ತಲೆಕೆಟ್ಟವ. ಇದೊಂದು ಹತಾಶೆಯ ಮಾತು. ಇನ್ನೊಮ್ಮೆ ಈ ತರಹ ಹೇಳಿಕೆ ನೀಡಿದ್ರೆ ಉಗ್ರವಾದ ಕ್ರಮ ಕೈಕೊಳ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಮಹತ್ವಾಕಾಂಕ್ಷಿ ಮುಳವಾಡ ಏತ ನೀರಾವರಿ ಹಂತ 3 ಲಿಫ್ಟ್ಗೆ ಮುಳವಾಡದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಸ್ವಾಮೀಜಿ ಹೇಳಿಕೆಗೆ ತಿರುಗೇಟು ನೀಡಿದ್ರು. ಸ್ವಾಮಿಜಿ ಚಿಲ್ಲರೆ ಕೆಲಸ ಬಿಡಬೇಕು. ಇಲ್ಲದಿದ್ದರೆ ಎಂ.ಬಿ. ಪಾಟೀಲ್ ಯಾರು ಅಂತಾ ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು.
ಇತ್ತೀಚೆಗೆ ಕಾರ್ಯಕ್ರವೊಂದರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಕೇಳುವವರು ಮನೆಯಲ್ಲಿ ದೇವರ ಜಗಲಿ ತಗೆಯಲಿ. ಹೆಣ್ಣು ಮಕ್ಕಳು ಕೊರಳಲ್ಲಿನ ತಾಳಿ ತೆಗೆಯಲಿ ಎಂದು ಶಿವಪ್ರಕಾಶ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಚೋದನಕಾರಿ ಶಬ್ದ ಪ್ರಯೋಗ ಕೆಳಮಟ್ಟದ ಭಾಷೆ. ಜನಪ್ರತಿನಿಧಿಗಳಾದವರು ಸಮಾಜಕ್ಕೆ ಮಾದರಿ ಆಗಿರಬೇಕು ಎಂದು ಹೆಗಡೆಗೆ ಸಲಹೆ ನೀಡಿದರು. ಅಲ್ಲದೆ ಕೀಳು ಮಟ್ಟದ ಮಾತನ್ನಾಡುವ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಮಹದಾಯಿ ನೀರಾವರಿ ಯೋಜನೆಯ ಬಗ್ಗೆ ಯಡಿಯೂರಪ್ಪಗೆ ಕನಿಷ್ಟ ಪರಿಜ್ಞಾನ ಇಲ್ಲ. ಮಹದಾಯಿ ನೀರು ಹರಿಸಲು ಕನಿಷ್ಟ ಎರಡು ವರ್ಷ ಬೇಕು. ಡ್ಯಾಂ ಆಗಿಲ್ಲ, ನೀರು ಪಡೆಯಲು ಡ್ಯಾಂ ಇಲ್ಲದೆ ನೀರು ಹರಿಸಲು ಆಗಲ್ಲ. ಸುಮ್ಮನೆ ಈಗಲೇ ನೀರು ಹರಿಸುತ್ತೇವೆ ಎಂದು ಯಡ್ಡಿಯೂರಪ್ಪ ಬಾಯಿಗೆ ಬಂದದ್ದು ಮಾತನಾಡುತ್ತಿದ್ದಾರೆಂದು ಹರಿಹಾಯ್ದರು.
ಸರ್ಕಾರದಲ್ಲಿ ನಮ್ಮ ಶಾಸಕರು ಇಲ್ಲದ ಕಡೆ ಸಿಎಂ ಹೋಗುತ್ತಿದ್ದಾರೆ. ಪರಮೇಶ್ವರ್ ಅವರು ಶಾಸಕರು ಇದ್ದ ಕಡೆ ಪ್ರವಾಸ ಮಾಡುತ್ತಿದ್ದಾರೆ. ಅದಕ್ಕೆ ಸಿಎಂ ಹಾಗೂ ಪರಮೇಶ್ವರ ಬೇರೆ ಬೇರೆ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನಾವು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ನಮ್ಮಲ್ಲಿ ಬಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ರು.