ಮೈಸೂರು: ಸಿದ್ದರಾಮಯ್ಯ ಸಿಎಂ. ಡಾ.ಎಚ್.ಸಿ. ಮಹದೇವಪ್ಪ ಶ್ಯಾಂಡೋ ಸಿಎಂ. ಇಂತಹ ಮಾತು ಕಾಂಗ್ರೆಸ್ ಪಾಳಯದಲ್ಲಿ ನಾಲ್ಕುವರೆ ವರ್ಷಗಳಿಂದಲೂ ಇದೆ. ಈ ಮಾತು ಅಕ್ಷರಶ: ಸತ್ಯ ಎಂಬುವಂತೆ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರ ನಡವಳಿಕೆಗಳು ಇವೆ. ಆದರೆ, ಈಗ ಇಂತಹ ದೋಸ್ತಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಕಾಂಗ್ರೆಸ್ ಪಾಳಯಕ್ಕೆ ಮಾತ್ರವಲ್ಲ ಎಲ್ಲರಿಗೂ ಗೋಚರವಾಗುತ್ತಿದೆ.
ಹೌದು. ದೋಸ್ತಿ ನಡುವೆ ಬಿರುಕು ಮೂಡಲು ಕಾರಣವಾಗಿರೋದು ಮುಂದಿನ ಚುನಾವಣೆಯ ಟಿಕೆಟ್ಗಳು. ನಂಜನಗೂಡು ಕ್ಷೇತ್ರದಲ್ಲಿ ಮಗ ಸುನೀಲ್ಬೋಸ್ ಕಣಕ್ಕೆ ಇಳಿಸಿ, ತಾವು ಟಿ. ನರಸೀಪುರ ಕ್ಷೇತ್ರದಲ್ಲೇ ಮುಂದುವರಿಯಬೇಕು ಎಂದು ಡಾ.ಎಚ್.ಸಿ ಮಹದೇವಪ್ಪ ಪ್ಲಾನ್ ಮಾಡಿದ್ದರು. ಇದಕ್ಕಾಗಿ, ಎರಡು ಕ್ಷೇತ್ರದ ಪಿಚ್ಗಳನ್ನು ರೆಡಿ ಮಾಡಿಕೊಂಡಿದ್ದರು.
ಸಿದ್ದರಾಮಯ್ಯ ಮತ್ತು ಅವರ ಮಗ ಹೇಗೆ ಅಕ್ಕಪಕ್ಕದ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುತ್ತಾರೋ ಹಾಗೇ ತಾನು ತನ್ನ ಮಗ ಅಕ್ಕಪಕ್ಕದ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುತ್ತೇವೆ ಅಂತಾ ಮಹದೇವಪ್ಪ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಮಹದೇವಪ್ಪ ಮಾಡಿಕೊಂಡ ಈ ಪ್ಲಾನ್ಗೆ ಅವರ ಕುಚುಕು ಗೆಳೆಯರಾಗಿರೋ ಸಿಎಂ ಸಿದ್ದರಾಮಯ್ಯ ಅವರೇ ಮುಳ್ಳಾಗಿರುವುದು ಇಬ್ಬರ ನಡುವಿನ 4 ದಶಕಗಳ ದೋಸ್ತಿಯಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎನ್ನುವ ಮಾತುಗಳು ಈಗ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ.
ನವ ಕರ್ನಾಟಕ ನಿರ್ಮಾಣ ಯಾತ್ರೆ ಸಮಾವೇಶಕ್ಕೆ ನಂಜನಗೂಡಿಗೆ ಬಂದಿದ್ದ ಸಿಎಂ, ನಂಜನಗೂಡಿನ ಮುಂದಿನ ಅಭ್ಯರ್ಥಿ ಹಾಲಿ ಶಾಸಕ ಕಳಲೆ ಕೇಶವಮೂರ್ತಿ ಎಂದು ಘೋಷಿಸಿಬಿಟ್ಟರು. ಇದು ನಿಜಕ್ಕೂ ಮಹದೇವಪ್ಪ ಮತ್ತು ಅವರ ಮಗನ ಪಾಲಿಗೆ ಬಿಗ್ ಶಾಕಿಂಗ್ ಸುದ್ದಿಯಾಗಿತ್ತು.
ಇಷ್ಟೇ ಅಲ್ಲದೇ ಟಿ. ನರಸೀಪುರಕ್ಕೆ ಹೋದ ಸಿಎಂ, ಅಲ್ಲಿ ಮುಂದಿನ ಚುನಾವಣೆಯಲ್ಲಿ ಮಹದೇವಪ್ಪ ಇಲ್ಲಿ ನಿಲ್ಲಲ್ಲ ಅಂತಾ ಘೋಷಿಸಿಬಿಟ್ಟರು. ಅಲ್ಲಿಗೆ, ಗೆಳೆಯ ಮಹದೇವಪ್ಪ ರನ್ನು ಮೈಸೂರು ಜಿಲ್ಲೆಯಿಂದ ಹೊರ ಓಡಿಸುವ ಮಾಸ್ಟರ್ ಪ್ಲಾನ್ ಸಿಎಂ ಮಾಡಿರೋದು ಖಾತ್ರಿಯಾಯಿತು.
ಸಿಎಂ ಸಿದ್ದರಾಮಯ್ಯ ಅವರ ಈ ಮಾಸ್ಟರ್ ಸ್ಟ್ರೋಕ್ ಗೆ ಮಹದೇವಪ್ಪ ಕುಗ್ಗಿದ್ದಾರೆ. ಅಲ್ಲದೆ, ಕುಚುಕು ಗೆಳೆಯನಂತಹ ಸಿದ್ದರಾಮಯ್ಯ ಬಗ್ಗೆ ಮುನಿಸಿಕೊಂಡಿದ್ದಾರೆ. ಸಿಎಂ ಮತ್ತು ಅವರ ಮಗ ಡಾ. ಯತೀಂದ್ರ ಇಬ್ಬರು ಮೈಸೂರು ರಾಜಕಾರಣದಲ್ಲಿ ಇರಬೇಕು. ನಾವು ಅಪ್ಪ – ಮಗ ಬೇರೆ ಆಗಬೇಕು. ಈಗ ಇದ್ಯಾವಾ ಸೀಮೆಯ ಲೆಕ್ಕಚಾರ ಎಂದು ತಮ್ಮ ಆಪ್ತ ವಲಯದಲ್ಲಿ ಮಹದೇವಪ್ಪ ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾದೇವಪ್ಪನವರಿಗೆ ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ಟಿಕೆಟ್ ನೀಡಲು ಸಿಂ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಸಿ.ವಿ. ರಾಮನ್ನಗರ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲು ಮಹದೇವಪ್ಪನವರಿಗೆ ಇಷ್ಟವಿಲ್ಲವಂತೆ. ಈಗಲೂ ಮಹದೇವಪ್ಪನವರಿಗೆ ಟಿ. ನರಸೀಪುರದಲ್ಲೇ ಸ್ಪರ್ಧಿಸಲು ಇಷ್ಟ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಸಿವಿ ರಾಮನ್ ನಗರದಲ್ಲಿ ಸೋಲಿನ ಭೀತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ನಿರ್ಧಾರದಿಂದ ಮಹದೇವಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ.