ಸ್ಮಾರ್ಟ್ ಮೀಟರ್ ದೊಡ್ಡ ಹಗರಣ- ಸಚಿವ ಜಾರ್ಜ್ ತಪ್ಪು ಮಾಹಿತಿ ನೀಡಿದ್ದಾರೆ: ಅಶ್ವಥ್ ನಾರಾಯಣ್‌

Public TV
2 Min Read

ಬೆಂಗಳೂರು: ಸ್ಮಾರ್ಟ್ ಮೀಟರ್ ದೊಡ್ಟ ಹಗರಣ ಆಗಿದೆ. ಇದಕ್ಕೆ ಇಂಧನ‌ ಇಲಾಖೆ ಸಚಿವರು ಉತ್ತರ ಕೊಡಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್‌, ಸಚಿವ ಜಾರ್ಜ್‌ಗೆ ಆಗ್ರಹ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಹಗರಣ ವ್ಯವಸ್ಥಿತವಾಗಿ ನಡೆದಿದೆ. ಸಚಿವರು ಮತ್ತು ಅವರ ಅಧಿಕಾರಿಗಳು ಇತ್ತೀಚೆಗೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ 9 ಸುಳ್ಳುಗಳನ್ನು ಹೇಳಿದ್ದಾರೆ ಎಂದು ಆರೋಪಿಸಿದರು. ಖುದ್ದು ಅಶ್ವಥ್ ನಾರಾಯಣ್‌, ಸಚಿವ ಜಾರ್ಜ್ ಮತ್ತು ಸಚಿವರು ಮಾಡಿದ್ದ ಸುದ್ದಿಗೋಷ್ಠಿಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಕೌಂಟರ್ ಕೊಟ್ಟರು.

ಸ್ಮಾರ್ಟ್ ಮೀಟರ್ ಟೆಂಡರ್ ಭಾರತ ಸರ್ಕಾರದ ನಿಗದಿತ ನಿಯಮಗಳ ಪ್ರಕಾರ ಮಾಡಲಾಗಿದೆ. ಪ್ರಿಬಿಡ್ ಟೆಂಡರ್‌ನಲ್ಲಿ ಯಾರೂ ಬಂದಿರಲಿಲ್ಲ ಅಂತ ಸಚಿವರು ಹೇಳಿದ್ರು. ಆದರೆ 10 ಜನರು ಪ್ರಿ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದರು. 117 ಜನರು ಮಾಹಿತಿ ಕೇಳಿದ್ದಾರೆ. ಕೇಂದ್ರದ ನಿಯಮಾವಳಿಯಂತೆ ಐಎಸ್ 16444 ಸ್ಟಾಂಡರ್ಡ್ ಇರುವ ಹತ್ತಾರು ಜನರಿದ್ದಾರೆ. ಅವರನ್ನೇ ರಾಜ್ಯವು ಪರಿಗಣಿಸಬೇಕಿತ್ತು. 1 ಲಕ್ಷ ಸ್ಮಾರ್ಟ್ ಮೀಟರ್ ಉತ್ಪಾದಿಸಿ ವಿತರಿಸಿದ ಅನುಭವ ಬೇಕಿತ್ತು. ಟೆಂಡರ್ 200 ಕೋಟಿಗಿಂತ ಹೆಚ್ಚು ಮೊತ್ತದ್ದಾದರೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಪ್ರಿಬಿಡ್ ವೇಳೆ ಇದನ್ನು ಹೇಳಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಇಲಾಖೆ ವಿರುದ್ದ ಆರೋಪ ಮಾಡಿದರು.

ಇಂಧನ ಮೀಟರ್‌ಗೆ ಸಂಬಂಧಿಸಿ ಕರ್ನಾಟಕದಲ್ಲಿ ರಿಟೇಲ್ ಔಟ್‍ಲೆಟ್‍ನಲ್ಲಿ 5 ವರ್ಷ ಅನುಭವ ಇರಬೇಕೆಂಬ ನಿಯಮವನ್ನೂ ಪರಿಗಣಿಸಿಲ್ಲ. ಮೀಟರ್ ಡಾಟಾ ಮ್ಯಾನೇಜ್‍ಮೆಂಟ್ ಸೊಲ್ಯೂಶನ್ ಅನ್ನು ಗ್ಲೋಬಲ್ ಆಗಿ ತೆಗೆದುಕೊಂಡಿಲ್ಲ. ಡಿಬಾರ್- ಬ್ಲ್ಯಾಕ್‍ಲಿಸ್ಟ್ ಆದವರನ್ನು ಪರಿಗಣಿಸಬಾರದು ಎಂಬ ನಿಯಮವೂ ಇದೆ. ಗ್ಲೋಬಲ್ ಎಂಬುದನ್ನು ಪರಿಗಣಿಸಿಯೇ ಇಲ್ಲ. ಕೇಂದ್ರದ ನಿಯಮಾವಳಿಯಂತೆ ಟೆಂಡರ್ ಕರೆದಿದ್ದಾರೆ ಅಂತ ಸಚಿವರು ಹೇಳಿರೋದೆ ಸುಳ್ಳು. ಕೇಂದ್ರದ ಪ್ರಮುಖ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಸಚಿವರು, ತಾತ್ಕಾಲಿಕ ಸಂಪರ್ಕ ಪಡೆಯುವವರಿಗೆ ಹಾಗೂ ಹೊಸ ಗ್ರಾಹಕರಿಗೆ ಕಡ್ಡಾಯ ಎಂದಿದ್ದಾರೆ. ಆದರೆ ಇದು ಕಡ್ಡಾಯವಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.‌ ಎಲ್ಲ ಗ್ರಾಹಕರಿಗೆ, ಫೀಡರ್, ಟ್ರಾನ್ಸ್‌ಫಾರ್ಮರ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿದ ಬಳಿಕವೇ ಹೊಸ ಗ್ರಾಹಕರಿಗೆ ಕಡ್ಡಾಯ ಮಾಡಬಹುದೆಂದು ಕೇಂದ್ರ ವಿದ್ಯುತ್ ಪ್ರಾಧಿಕಾರವು (ಸಿಇಸಿ) ತಿಳಿಸಿದೆ. ಸರ್ಕಾರವು ಗ್ರಾಹಕರ ಜೇಬಿನಿಂದ ಹಣ ಲೂಟಿ ಮಾಡಲು ಮುಂದಾಗಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದರು.

ಇಂಧನ ಇಲಾಖೆಯಲ್ಲಿ ಲೂಟಿ, ಕಳ್ಳತನ ಮಾಡುತ್ತಿದ್ದಾರೆ. ಗ್ರಾಹಕರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥಕ್ಕಾಗಿ, ಲಾಭಕ್ಕಾಗಿ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು. ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ. ಅಕ್ರಮ ಏನು? ತಪ್ಪು ಏನು ಅಂತ ತಿಳಿಸಿದ್ದೇವೆ. ದಾಖಲೆ ಸಹಿತವಾಗಿ ತಪ್ಪಿನ ಮಾಹಿತಿ ನೀಡಿದ್ದೇವೆ. ನಾಗರಿಕರು, ಗ್ರಾಹಕರ ಹಿತ ಕಾಪಾಡುವ ದೃಷ್ಟಿಯಿಂದ ಸಚಿವರಿಗೆ ಪತ್ರವನ್ನೂ ಕೊಟ್ಟಿದ್ದೇವೆ. ಇದಕ್ಕೆ ಸಚಿವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

Share This Article