ಮೋದಿ, ಅಮಿತ್ ಶಾ ಯಾರ ರಾಜೀನಾಮೆಯನ್ನು ಕೊಡಿಸೋಕೆ ಹೋಗಿಲ್ಲ: ಬಿಜೆಪಿ ಪರ ಜಿಟಿಡಿ ಬ್ಯಾಟಿಂಗ್

Public TV
2 Min Read

ಮೈಸೂರು: ರಾಜ್ಯ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಸಿಎಂ ಆರೋಪಿಸಿದರೆ, ಸಚಿವ ಜಟಿ ದೇವೇಗೌಡ ಬಿಜೆಪಿಯವರು ಸರ್ಕಾರ ಬೀಳಿಸಲು ಮುಂದಾಗುತ್ತಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಯಾರ ರಾಜೀನಾಮೆಯನ್ನು ಕೊಡಿಸೋಕೆ ಹೋಗಿಲ್ಲ. ಅವರು ಎದುರಾಳಿ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸೋ ಕೆಲಸ ಮಾಡುತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಆಗಲಿ, ಅಮಿತ್ ಶಾ ಅವರಾಗಲಿ ಯಾವುದೇ ರಾಜೀನಾಮೆ ಕೊಡಿಸಲ್ಲ. ವಿರೋಧ ಪಕ್ಷ ಸರ್ಕಾರವನ್ನು ಅಭದ್ರತೆ ಸೃಷ್ಟಿಸುವ ದಿಕ್ಕಲ್ಲಿ ಮೋದಿ ಹಾಗೂ ಅಮಿತ್ ಶಾ ಅವರು ಹೋಗಿಲ್ಲ. ಪ್ರಧಾನಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಕೇಂದ್ರದಲ್ಲಿ ದೇಶಗೋಸ್ಕರ ಏನು ಮಾಡಬೇಕು? ಕಾಶ್ಮೀರ, ಚೀನಾ, ಅಮೆರಿಕ ಜೊತೆ ಏನೂ ಮಾಡಬೇಕು ಎಂದು ಮೋದಿ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಜು. 5ರಂದು ಮೋದಿ ರೈತರ ಪರವಾಗಿ ಬಜೆಟ್ ಕೊಡುವುದಾಗಿ ಹೇಳಿದ್ದಾರೆ. ಅವರು ಅಧಿವೇಶನ ಹಾಗೂ ಬಜೆಟ್ ಕಡೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಅವರ ಮೇಲೆ ಯಾರು ಕೇಸರು ಎರಚುವ ಹಾಗಿಲ್ಲ. ಜೆಡಿಎಸ್ ಪಕ್ಷದಲ್ಲೂ ಯಾರು ಕೂಡ ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಜಾರಕಿಹೊಳಿ ಅವರು ಯಾವಾಗ ಸ್ಪೀಕರ್ ಮುಂದೆ ಹೋಗಿ ರಾಜೀನಾಮೆ ಕೊಟ್ಟಿದ್ದಾರೋ ಗೊತ್ತಿಲ್ಲ. ಆನಂದ್ ಸಿಂಗ್ ಅವರಿಗೆ ಏನೇನು ವೈಯಕ್ತಿಕ ಕಷ್ಟ ಇದೆಯೋ, ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೋ ಅದನ್ನು ಕಾಂಗ್ರೆಸ್ ನಾಯಕರು ಸರಿಪಡಿಸಿಕೊಳ್ಳುತ್ತಾರೆ ಎಂದರು.

ಸರ್ಕಾರ ಬೀಳಿಸೋದು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಇಲ್ಲ. ಅದೇನಿದ್ದರೂ ಅಮಿತ್ ಶಾ ಹಾಗೂ ಮೋದಿಯವರ ಕೈಯಲ್ಲಿ ಇದೆ. ಬಿಜೆಪಿ ಸರ್ಕಾರ ರಚನೆ ಮಾಡುವ ನಿರ್ಧಾರ ನರೇಂದ್ರ ಮೋದಿ ನಿರ್ದೇಶನ ಇದ್ದರೆ ಮಾತ್ರ ಆಗಲು ಸಾಧ್ಯ. ಬೇರೆ ಯಾರ ನಿರ್ದೇಶನ ಇದ್ದರೂ ಅಧಿಕೃತ ಅಲ್ಲ ಎಂದು ಜಿಟಿ ದೇವೇಗೌಡರು ತಿಳಿಸಿದರು.

ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ವಿಚಾರ ತಿಳಿದು ಸಿಎಂ, ಅಮೆರಿಕದ ನ್ಯೂಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ‘ನಿರಂತರ ಹಗಲುಗನಸು’ ಎಂದು ಟ್ವೀಟ್ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *