ಮತ್ತೆ ಮೋದಿ ಹೊಗಳಿ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಜಿಟಿಡಿ

Public TV
1 Min Read

ಮೈಸೂರು: ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಸಚಿವ ಜಿ.ಟಿ.ದೇವೇಗೌಡ ಮೋದಿ ಅವರನ್ನು ಹೊಗಳುವ ಮೂಲಕ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಜಿಟಿಡಿ, ಸರ್ಕಾರ ರಚನೆಯಾದ ಪ್ರಾರಂಭದಲ್ಲಿ ಬಿಜೆಪಿ ಅವರು ಆಪರೇಶನ್ ಕಮಲ ಮಾಡುತ್ತಿದ್ದರು. ಆದರೆ ಕೇಂದ್ರದಲ್ಲಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಬಿಜೆಪಿಯವರು ಆಪರೇಶನ್ ಕಮಲ ಮಾಡುವುದನ್ನು ನಿಲ್ಲಿಸಿದ್ದಾರೆ. ನಾನು ಸೋಮವಾರ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ ಹಾಗೂ ಮುಂದೆಯೂ ಬದ್ಧನಾಗಿಯೇ ಇರುತ್ತೇನೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಬೇಡಿ ಎಂದು ಸಚಿವ ಜಿ.ಟಿ ದೇವೇಗೌಡ ಮನವಿ ಮಾಡಿಕೊಂಡರು.

ಸರ್ಕಾರ ಸುಭದ್ರವಾಗಿದೆ. ಕರ್ನಾಟಕದಲ್ಲಿ ಸಿಎಂ 4 ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ. ನರೇಂದ್ರ ಮೋದಿ ಕೇಂದ್ರದಲ್ಲಿ 5 ವರ್ಷ ಆಡಳಿತ ನಡೆಸುತ್ತಾರೆ. ಈ ಹಿಂದೆ ರಾಜೀವ್ ಗಾಂಧಿ ಅವರಿದ್ದಾಗ ಇಲ್ಲಿ ರಾಮಕೃಷ್ಣ ಹೆಗಡೆ ಇದ್ದರು. ಹಾಗೆಯೇ ನಮ್ಮಲ್ಲೂ ಕೂಡ ಯಾರು ಏನೇ ಮಾಡಿದರೂ ಸಿಎಂ ಕರ್ನಾಟಕದ ಮುಖ್ಯಮಂತ್ರಿ ಆಗಿರುತ್ತಾರೆ. ಮೋದಿ ಭಾರತದ ಪ್ರಧಾನಿ ಆಗಿರುತ್ತಾರೆ. ಜನ ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಬೇರೆ ತೀರ್ಪು ಕೊಟ್ಟಿದ್ದಾರೆ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಗರ ಪ್ರದಕ್ಷಿಣೆ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಇದು ಸಾಧ್ಯವಿಲ್ಲ ಇಬ್ಬರು ರಾಜೀನಾಮೆ ನೀಡಿದರೆ ಸರ್ಕಾರ ಬಿದ್ದು ಹೋಗಲ್ಲ. ಇಬ್ಬರ ಮನವೊಲಿಸುವ ಕಾರ್ಯ ನಡೆದಿದೆ. ಆಪರೇಷನ್ ಕಮಲದ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂದು ಮಂಗಳವಾರ ಸಿದ್ದರಾಮಯ್ಯ ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *