ಜಾಮೀನು ಪಡೆದ ಬಳಿಕ ಡಿಕೆಶಿಯಿಂದ `ದೊಡ್ಡ ನಮಸ್ಕಾರ’!

Public TV
1 Min Read

ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಿದೆ. 50 ಸಾವಿರ ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ ಡಿ.ಕೆ.ಶಿವಕುಮಾರ್ ಜತೆಗೆ ಐವರಿಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಐಟಿ ದೂರಿಗೆ ಮೊದಲು ಪೂರ್ವಾನುಮತಿ ಪಡೆದಿಲ್ಲ. ಆಯುಕ್ತರ ಬದಲು ನಿರ್ದೇಶಕರಿಂದ ಪೂರ್ವಾನುಮತಿ ಪಡೆಯಲಾಗಿತ್ತು. ಇದರಿಂದ ಐಟಿ ಕಾಯ್ದೆಯ ಉಲ್ಲಂಘನೆಯಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಡಿಕೆ ಶಿವಕುಮಾರ್ ಹಾಗೂ ಇತರೆ ಆರೋಪಿ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ.

ವಾದವನ್ನು ಅಲಿಸಿದ ಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಡಿಕೆ ಶಿವಕುಮಾರ್ ಕೋರ್ಟ್ ಗೆ ಹಾಜರಾಗಿದ್ದರು. ಕೋರ್ಟ್ ನಲ್ಲಿ ಡಿಕೆಶಿ ಪರ ಹಿರಿಯ ವಕೀಲ ಬಿ.ವಿ ಆಚಾರ್ಯ ಮತ್ತು ನಂಜುಂಡ ರೆಡ್ಡಿ ವಾದ ಮಂಡಿಸಿದ್ದರು.

ಜಾಮೀನು ಪಡೆದು ಹೊರ ಬಂದ ಬಳಿಕ ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಕೈ ಮುಗಿದು ಒಂದು ನಿಮಿಷ ನಿಂತುಕೊಂಡು, ನ್ಯಾಯಾಲಯಕ್ಕೆ ತಲೆಬಾಗಿ ಬಂದಿದ್ದೇನೆ ಅಷ್ಟೇ ಎಂದು ಹೇಳಿ ಹೊರಟು ಹೋದರು.

ಏನಿದು ಪ್ರಕರಣ?
ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಐಟಿ ಕಾಯಿದೆ ಸೆಕ್ಷನ್ 277, 278, 193, 199, ಹಾಗೂ 120(ಬಿ) ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ನ್ಯಾಯಾಲಯದ ನ್ಯಾ.ಎಂ.ಎಸ್. ಆಳ್ವಾ ಅವರು ಡಿಕೆ ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಡಿಕೆಶಿ ಜೊತೆಗೆ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧವೂ ಸಮನ್ಸ್ ಜಾರಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *