– ಮಂಡ್ಯ ಹೊಣೆ ನನಗೆ, ಪರಿಸ್ಥಿತಿ ಬದಲಾಗುತ್ತೆಂದ ಡಿಕೆಶಿ
ಮಂಡ್ಯ: ಭಿನ್ನಮತ ಶಮನ ಮತ್ತು ನಿಖಿಲ್ ಕುಮಾರಸ್ವಾಮಿಯನ್ನ ಗೆಲ್ಲಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಡಿ.ಕೆ ಶಿವಕುಮಾರ್ ಹೆಗಲಿಗೆ ಹಾಕಿದೆ. ಈ ಹಿನ್ನೆಲೆಯಲ್ಲಿ ಇವತ್ತು ಮತ್ತೆ ತಮ್ಮ ಮನೆಯಲ್ಲಿ ಮಂಡ್ಯ ಕಾಂಗ್ರೆಸ್ಸಿಗರ ಸಭೆ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್ ಅವರು, ಕುಮಾರಸ್ವಾಮಿ ಅವರು ರಿಸ್ಕ್ ತೆಗೆದುಕೊಂಡು ಪಾಲಿಟಿಕ್ಸ್ ಮಾಡುತ್ತಾರೆ. ಅವರಾಗಲಿ, ಅವರ ತಂದೆಯವರಾಗಲಿ ಹೋರಾಟಗಾರರು. ಸೇಫ್ ಪಾಲಿಟಿಕ್ಸ್ ಮಾಡೋರಲ್ಲ. ಎಲ್ಲ ಕಷ್ಟ ಕಾಲದಲ್ಲೂ ಫೈಟ್ ಮಾಡುತ್ತಾರೆ. ಶಾಸಕನ ಮಗ ರಾಜೀನಾಮೆ ಕೊಟ್ಟು ಹೋದ ತಕ್ಷಣ ಕೊನೆಗೆ ಪಕ್ಷ ಉಳಿಸುವ ಸಲುವಾಗಿ ತಮ್ಮ ಧರ್ಮಪತ್ನಿಯನ್ನು ನಿಲ್ಲಿಸಿ ರಿಸ್ಕ್ ತೆಗೆದುಕೊಂಡು ಗೆಲ್ಲಿಸಿದ್ದಾರೆ ಎಂದರು.
ಮಂಡ್ಯದಲ್ಲಿ ಪರಿಸ್ಥಿತಿ ಹೀಗೆ ಇರುವುದಿಲ್ಲ. ಬದಲಾವಣೆ ಆಗೇ ಆಗುತ್ತದೆ. ಅಲ್ಲಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಬೇಸರ ಇದೆ. ಚುನಾವಣೆ ಅಂದರೆ ಇದೆಲ್ಲಾ ಸಾಮಾನ್ಯ. ಅದೆಲ್ಲ ಸರಿ ಆಗುತ್ತದೆ. ಮಂಡ್ಯದ ಜವಾಬ್ದಾರಿಯನ್ನು ಹೈಕಮಾಂಡ್ ನನಗೆ ಕೊಟ್ಟಿದೆ. ಹೀಗಾಗಿ ಎಲ್ಲರನ್ನೂ ಕರೆದು ಮಾತನಾಡಿಸುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು.