ಹಾಲಿನ ಪ್ರೋತ್ಸಾಹ ಧನ 5ರಿಂದ 6 ರೂ.ಗೆ ಏರಿಕೆ

Public TV
1 Min Read

ಬೆಳಗಾವಿ: ಕೆಎಂಎಫ್ ಒಕ್ಕೂಟದಿಂದ ರೈತರ ಪ್ರತಿ ಲೀಟರ್ ಹಾಲಿಗೆ ನೀಡಲಾಗುತ್ತಿದ್ದ 5 ರೂಪಾಯಿ ಪ್ರೋತ್ಸಾಹ ಧನವನ್ನು 6 ರೂ.ಗೆ ಹೆಚ್ಚಿಸಲಾಗುವುದು ಎಂದು ಕೆಎಂಎಫ್‌ನ ನೂತನ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಮೊದಲ ಬಾರಿ ಬೆಳಗಾವಿಯಲ್ಲಿರುವ ಕೆಎಂಎಫ್ ಕಚೇರಿಗೆ ಆಗಮಿಸಿದ್ದರು. ಸೂತನ ಅಧ್ಯಕ್ಷರನ್ನು ಕೆಎಂಎಫ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಹೊಸ ಹಾಲು ಉತ್ಪಾದನಾ ಯಂತ್ರಗಳಿಗೆ ರಿಬ್ಬನ್ ಕಟ್ ಮಾಡುವುದರ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾನು ಪ್ರಯತ್ನ ಮಾಡಿದ್ದರೆ ಸಚಿವನಾಗುತ್ತಿದ್ದೆ. ಆದರೆ ಸಚಿವ ಸ್ಥಾನ ಬೇಕಾಗಿರಲಿಲ್ಲ, ಅದರ ಆಸೆ ನನಗಿಲ್ಲ. ಹೊರತಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಅದೇ ರೀತಿ ಈಗ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.

ರೈತ ಸೇವೆ ಮಾಡಲು ಸಚಿವ ಸ್ಥಾನ ಬಿಟ್ಟು ಕೆಎಂಎಫ್ ಅಧ್ಯಕ್ಷನಾಗಿದ್ದೇನೆ. ರೈತರು ಗುಣಮಟ್ಟದ ಹಾಲು ನೀಡಿದರೆ ಪ್ರತಿ ಲೀಟರ್ ಹಾಲಿಗೆ 6 ರೂಪಾಯಿ ಪ್ರೋತ್ಸಾಹ ಧನ ನೀಡುವ ಚಿಂತನೆ ಇದೆ. ಕೆಎಂಎಫ್‌ನಲ್ಲಿ ಅನೇಕ ಸಮಸ್ಯೆಗಳಿದ್ದು ಎಲ್ಲವನ್ನೂ ಸರಿಪಡಿಸಲಾಗುವುದು. ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದೇ ಇರುವುದು ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದ ರೈತರಿಗೆ ಪ್ರೋತ್ಸಾಹಧನ ಪಾವತಿ ವಿಳಂಬವಾಗುತ್ತಿದೆ. ಇದೆಲ್ಲವೂ ಸರಿ ಹೋದ ಬಳಿಕ ಪ್ರತಿ ತಿಂಗಳು ಪ್ರೋತ್ಸಾಹಧನ ಆಯಾ ತಿಂಗಳು ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

‘ಕ್ಷೀರಭಾಗ್ಯ’ ಯೋಜನೆ ಅಡಿ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಒದಗಿಸಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆಯ ಕೆಲವರು ಪುಡಿಯನ್ನು ಮಾರಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ 200 ಮಿ.ಲೀ ಹಾಲನ್ನು ಫ್ಲೆಕ್ಸಿ ಪ್ಯಾಕ್‌ಗಳಲ್ಲಿ ಪೂರೈಕೆ ಮಾಡಲು ಚಿಂತನೆ ನಡೆದಿದೆ. ಇದರಿಂದಾಗಿ ಮಕ್ಕಳಿಗೆ ಗುಣಮಟ್ಟದ ಹಾಲು ದೊರೆಯಲಿದೆ. ಬೆಳಗಾವಿ, ಮಂಗಳೂರು ಹಾಗೂ ತುಮಕೂರು ಘಟಕಗಳಲ್ಲಿ ಪ್ಯಾಕ್‌ಗಳನ್ನು ಸಿದ್ಧಪಡಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *