– ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಮೋದಿ ಸಲಹೆ
– ಇಲಾಖಾ ಕಾರ್ಯದರ್ಶಿಗಳ ತಂಡ ರಚನೆಗೆ ನಿರ್ದೇಶನ
– ಆಹಾರ ಭದ್ರತೆ, ರೈತರಿಗೆ ರಸಗೊಬ್ಬರ ಲಭ್ಯತೆ ಮೇಲೆ ನಿಗಾ
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಮಹತ್ವದ ಚರ್ಚೆ ನಡೆಸಿದ್ದಾರೆ.
ದೇಶದ ಸದ್ಯದ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ, ಭವಿಷ್ಯದಲ್ಲಿ ಭಾರತದ ಮೇಲಾಗುವ ಪರಿಣಾಮ ಹಾಗೂ ಸರ್ಕಾರ ಜನಹಿತಕ್ಕಾಗಿ ಕೈಗೊಳ್ಳಬಹುದಾದ ಪರಿಹಾರ, ಪರ್ಯಾಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರನ್ನು ಒಳಗೊಂಡಂತೆ ಹಿರಿಯ ಸಚಿವರುಗಳ ತಂಡ ಸಹ ರಚಿಸಿದ್ದಾರೆ. ಇದನ್ನೂ ಓದಿ: LPG ಬಿಕ್ಕಟ್ಟು: 14 ಕೆಜಿ ಬದಲಿಗೆ 10 ಎಲ್ಪಿಜಿ ಪೂರೈಕೆಗೆ ಕೇಂದ್ರ ಚಿಂತನೆ
ಸಂಪುಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಅವರು, ಜಾಗತಿಕ ಪರಿಸ್ಥಿತಿ ಮತ್ತು ಕೇಂದ್ರ ಸರ್ಕಾರದ ಸಚಿವಾಲಯ, ಇಲಾಖೆಗಳು ಕೈಗೊಂಡಿರುವ ಕ್ರಮಗಳ ಕುರಿತು ಸಂಪುಟ ಕಾರ್ಯದರ್ಶಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಕೃಷಿ, ರಸಗೊಬ್ಬರ, ಆಹಾರ ಭದ್ರತೆ, ಪೆಟ್ರೋಲಿಯಂ, ವಿದ್ಯುತ್, ಎಂಎಸ್ಎಂಇಗಳು, ರಫ್ತುದಾರರು, ಸಾಗಣೆ, ವ್ಯಾಪಾರ, ಹಣಕಾಸು ವಲಯಗಳ ಮೇಲಿನ ನಿರೀಕ್ಷಿತ ಪರಿಣಾಮ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಖಾರಿಫ್ ಋತುವಿನಲ್ಲಿ ರೈತರ ಮೇಲಾಗುವ ಪರಿಣಾಮ ಮತ್ತು ರಸಗೊಬ್ಬರ ಅಗತ್ಯತೆ, ಪೂರೈಕೆ ಬಗ್ಗೆ ನಿರ್ಣಯ ಕೈಗೊಂಡರು. ಅಲ್ಲದೇ, ರಸಗೊಬ್ಬರ ದಾಸ್ತಾನು, ಲಭ್ಯತೆ ಹಾಗೂ ಪರ್ಯಾಯ ಮೂಲಗಳ ಕುರಿತು ಚರ್ಚಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್ – ಹೆಚ್ಚುವರಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ: ಮುನಿಯಪ್ಪ
Chaired a meeting of the CCS to review the mitigating measures in the wake of the ongoing conflict in West Asia.
We had extensive discussions on short, medium and long term measures, including ensuring continued availability of fertilisers for farmers, diversifying import… pic.twitter.com/a0SQoGf39e
— Narendra Modi (@narendramodi) March 22, 2026
ಆಹಾರ ಭದ್ರತೆಗೆ ಜೋಶಿ ಜೊತೆ ಮಹತ್ತರ ಚರ್ಚೆ, ಪ್ರಧಾನಿ ಸಂತಸ:
ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಆಹಾರ ಧಾನ್ಯ, ಪದಾರ್ಥಗಳ ಸಕಾಲಿಕ ಲಭ್ಯತೆ ಬಗ್ಗೆ ಪ್ರಧಾನಿ ಮೋದಿ ಅವರು ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಹತ್ತರ ಚರ್ಚೆ ನಡೆಸಿದರು. ಭವಿಷ್ಯದಲ್ಲಿ ನಿರಂತರ ಆಹಾರ ಲಭ್ಯತೆ ಹಾಗೂ ಜನಸಾಮಾನ್ಯರ, ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿ ತ್ವರಿತ ಕ್ರಮ ಕೈಗೊಂಡ ಸಚಿವ ಜೋಶಿ ಅವರ ಕಾರ್ಯ ವೈಖರಿಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ವಿದ್ಯುತ್ ಕೊರತೆಯಾಗದು:
ವಿದ್ಯುತ್ ಸ್ಥಾವರಗಳಲ್ಲಿ ಇರುವ ಕಲ್ಲಿದ್ದಲು ದಾಸ್ತಾನು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆ ಸಹ ಹೆಚ್ಚಳವಾಗಿದೆ. ಹಾಗಾಗಿ ದೇಶದಲ್ಲಿ ವಿದ್ಯುತ್ ಕೊರತೆಯಾಗುವುದಿಲ್ಲ ಎಂದು ಅಭಿಪ್ರಾಯಿಸಿದ ಪ್ರಧಾನಿ ಸೌರ ಕ್ರಾಂತಿ, ಪವನ ವಿದ್ಯುತ್, ಹಸಿರು ಇಂಧನದಲ್ಲಾದ ಗಮನಾರ್ಹ ಸಾಧನೆ ಭಾರತದ ವಿದ್ಯುತ್ ವಲಯವನ್ನು ಬಲಪಡಿಸಿದೆ ಎನ್ನುತ್ತ ಸಚಿವ ಜೋಶಿ ಅವರ ಕಾರ್ಯತತ್ಪರತೆಗೆ ಭೇಷ್ ಹೇಳಿದರು.
ರಾಸಾಯನಿಕ, ಔಷಧ, ಪೆಟ್ರೋಕೆಮಿಕಲ್ ಮತ್ತು ಕೈಗಾರಿಕಾ ವಲಯಗಳಿಗೆ ಅಗತ್ಯವಿರುವ ಆಮದು ಮೂಲಗಳನ್ನು ವೈವಿಧ್ಯಗೊಳಿಸುವ ಬಗ್ಗೆ ಪ್ರಧಾನಿ ಸಲಹೆ ನೀಡಿದರು. ಅಂತೆಯೇ ಭಾರತೀಯ ಸರಕುಗಳನ್ನು ಉತ್ತೇಜಿಸಲು ಮುಂದಿನ ದಿನಗಳಲ್ಲಿ ಹೊಸ ರಫ್ತು ತಾಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಹ ಪ್ರಸ್ತಾಪಿಸಿ, ಆಲೋಚನೆ ನಡೆಸಿದರು.
ಸಚಿವ-ಕಾರ್ಯದರ್ಶಿ ತಂಡ ರಚನೆ:
ಈ ಜಾಗತಿಕ ಯುದ್ಧದ ಸನ್ನಿವೇಶದಲ್ಲಿ ದೇಶ ಭದ್ರತೆ, ರಕ್ಷಣೆ, ಆಹಾರ, ಅಗತ್ಯ ಸಾಮಗ್ರಿ ಪೂರೈಕೆ ವಿಚಾರವಾಗಿ ಸಮರ್ಪಕ, ಸಮರ್ಪಿತವಾಗಿ ಕೆಲಸ ಮಾಡಲು ಸಚಿವರು ಮತ್ತು ಕಾರ್ಯದರ್ಶಿಗಳ ತಂಡ ರಚನೆಗೆ ಪ್ರಧಾನಿ ನಿರ್ದೇಶನ ನೀಡಿದರು. ಮಧ್ಯಪ್ರಾಚ್ಯ ಯುದ್ಧ ಸಂಘರ್ಷ ತೀವ್ರಗೊಳ್ಳುತ್ತಿದ್ದರಿಂದ ಇಂದು ಇಡೀ ಜಗತ್ತೇ ಒಂದಿಲ್ಲೊಂದು ರೂಪದಲ್ಲಿ ಕ್ಷಾಮ, ಪರಿಣಾಮ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾಗರಿಕರ ರಕ್ಷಣೆಗೆ ಸರ್ವ ಪ್ರಯತ್ನ ನಡೆಸುವಂತೆ ಸಚಿವ ಸಂಪುಟ ಸಮಿತಿಗೆ ನಿರ್ದೇಶನ ನೀಡಿದರು.
ಮಾರುಕಟ್ಟೆಗಳಲ್ಲಿ ಕೃತಕ ಅಭಾವ ಸೃಷ್ಟಿ ಮತ್ತು ಪ್ರಮುಖ ಸರಕುಗಳ ಸಂಗ್ರಹಣೆ ಮೇಲೆ ನಿಗಾ ವಹಿಸುವ ಜೊತೆಗೆ ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಪ್ರಮುಖ ಸಚಿವರುಗಳು ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ಸಲಹೆ ನೀಡಿದರು.ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ – ಸೆನ್ಸೆಕ್ಸ್ 1,700 ಪಾಯಿಂಟ್ಗಳ ಕುಸಿತ

