ಬಸವೇಶ್ವರ ಪುತ್ಥಳಿಗೆ ಸಗಣಿ ಎರಚಿರುವುದನ್ನು ಖಂಡಿಸಿ ಕರವೇ ಹೋರಾಟ

Public TV
2 Min Read

ಗದಗ: ಬಸವಣ್ಣನವರ ಭಾವಚಿತ್ರಕ್ಕೆ ಸಗಣಿ ಬಳಿದು, ಕನ್ನಡ ಬಾವುಟ ಸುಟ್ಟ ಎಂಇಎಸ್ ಹಾಗೂ ಶಿವಸೇನೆ ಪುಂಡರ ವಿರುದ್ಧ ಕ್ರಮಕೈಗೊಳ್ಳಲು ಟಿ.ಎ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣು ಗೋಡಿ ಮಾತನಾಡಿ, ಬೆಳಗಾವಿಯಲ್ಲಿ ತಾಯಿ ನೆಲಕ್ಕಾಗಿ ಹೋರಾಡಿದ ರಾಣಿ ಚೆನ್ನಮ್ಮ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಗೂಂಡಾಗಳು ವಿರೂಪಗೊಳಿಸಿದ್ದಾರೆ. ಈ ಬೆನ್ನಲ್ಲೇ ಖಾನಾಪುರದ ಹಲಸಿಯಲ್ಲಿ ಕನ್ನಡ ಬಾವುಟ ಸುಟ್ಟು, ಬಸವಣ್ಣನವರ ಭಾವಚಿತ್ರಕ್ಕೆ ಸಗಣಿ ಬಳಿದ ಘಟನೆ ನಡೆದಿದೆ. ಇದು ಕರವೇ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮತಾವಾದದ ಹರಿಕಾರ ಬಸವಣ್ಣನವರಿಗೆ ಎಂಇಎಸ್ ಮತ್ತು ಶಿವಸೇನೆ ಭಯೋತ್ಪಾದಕರು ಅಪಮಾನ ಮಾಡುವ ಮೂಲಕ ಮಾನವ ಕುಲಕ್ಕೆ ಅವಮಾನ ಎಸಗಿದ್ದಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಬಸವಣ್ಣನವರಿಗಾದ ಅವಮಾನ ಸಹಿಸಲಸಾಧ್ಯ. ಮಹಾನ್ ಮಾನವತಾವಾದಿಗೆ ಅವಮಾನ ಮಾಡಿದ ನೀಚರಿಗೆ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಇವರನ್ನು ಶಿಕ್ಷಿಸದಿದ್ದರೆ, ಜನರೇ ಶಿಕ್ಷಿಸುವ ಕಾಲ ಬಂದಿದೆ. ಸರ್ಕಾರ ಈಗಲಾದರೂ ಕಾರ್ಯೋನ್ಮುಖವಾಗಬೇಕು. ಕೂಡಲೇ ಈ ದುಷ್ಕೃತ್ಯ ಎಸಗಿದ ಎಲ್ಲಾ ಅಪರಾಧಿಗಳನ್ನು ಸರ್ಕಾರ ಬಂಧಿಸಿ, ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡರ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಟೋಲ್ ಆದಾಯ ಮುಂದಿನ 3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ

ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ರಾಜ್ಯ ಕಾರ್ಯದರ್ಶಿಯಾದ ಹನುಮಂತ ಅಬ್ಬೀಗೇರಿ ಯುವ ಘಟಕದ ಅಧ್ಯಕ್ಷರಾದ ನಿಂಗನಗೌಡ ಮಾಲಿಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಹೊನ್ನಾಪುರ, ಗದಗ ತಾಲೂಕು ಅಧ್ಯಕ್ಷರಾದ ನಾಗಪ್ಪ ಅಣ್ಣಿಗೇರಿ, ಹನುಮಂತ ಪೂಜಾರ, ರೈತ ಘಟಕದ ಅಧ್ಯಕ್ಷರಾದ ಮೈಲಾರೈಪ್ಪ ಕರಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಆಶಾ ಜೂಲಗುಡ್ಡ, ರತ್ನಮ್ಮ ಯಲರ್ಬುಗಿ ಇತರರಿದ್ದರು. ಇದನ್ನೂ ಓದಿ: MES ಗಲಭೆಗೆ ಕಾಂಗ್ರೆಸ್, ಬಿಜೆಪಿ ಕೈವಾಡ ಇಲ್ಲ, ಇದು ಪುಂಡ ಪೋಕರಿಗಳ ಕೆಲಸ: ಪ್ರಹ್ಲಾದ್ ಜೋಶಿ

Share This Article
Leave a Comment

Leave a Reply

Your email address will not be published. Required fields are marked *