ಕೊಡಲಿಯಿಂದ ತಂದೆಯ ಕತ್ತನ್ನ ಸೀಳಿದ-ಭಯಭೀತನಾಗಿ ಫೆವಿಕ್ವಿಕ್ ನಿಂದ ಅಂಟಿಸಲು ಮುಂದಾದ

Public TV
1 Min Read

ಲಕ್ನೋ: ಮಗನೊಬ್ಬ ತಂದೆಯ ಕುತ್ತಿಗೆಗೆ ಭಾಗಕ್ಕೆ ಕೊಡಲಿಯಿಂದ ಹಲ್ಲೆ ನಡೆಸಿ, ನಂತರ ಫೆವಿಕ್ವಿಕ್ ನಿಂದ ಸೀಳಿದ ಕತ್ತಿನ ಭಾಗವನ್ನು ಜೋಡಿಸಲು ಮುಂದಾದ ಘಟನೆ ಉತ್ತರ ಪ್ರದೇಶ ರಾಜ್ಯದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.

ಜಗದೀಶ್ ಮಿಶ್ರಾ ಎಂಬಾತನೇ ತಂದೆಯ ಕೊಲೆ ಯತ್ನಕ್ಕೆ ಮುಂದಾದ ಮಗ. ರಾಮ್‍ದೇವ್ ಮಿಶ್ರಾ ಎಂಬವರೇ ಮಗನಿಂದ ಹಲ್ಲೆಗೊಳಾಗ ತಂದೆ. ಶನಿವಾರ ಈ ಘಟನೆ ನಡೆದಿದ್ದು, ಮೊದಲಿಗೆ ಜಗದೀಶ್ ತನ್ನ ತಂದೆಯ ಕುತ್ತಿಗೆಗೆ ಮನೆಯಲ್ಲಿ ಇದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಮೊದಲಿಗೆ ಒಂದೇ ಏಟಿಗೆ ತಂದೆ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದಾನೆ. ಕೆಲವೇ ಕ್ಷಣದಲ್ಲಿ ತಂದೆ ಉಸಿರಾಟ ಮತ್ತು ಚೀರಾಟ ಕೇಳಿದ ಮಗ ಜಗದೀಶ್ ‘ಫೆವಿಕ್ವಿಕ್’ ಸಹಾಯದಿಂದ ಸೀಳಿರುವ ಭಾಗವನ್ನು ಜೋಡಿಸಲು ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು?: ರೈಲ್ವೆ ಇಲಾಖೆಯ ನಿವೃತ್ತ ನೌಕರರಾಗಿರುವ ರಾಮ್‍ದೇವ್ ಮಗನೊಂದಿಗೆ ಸೋನಹಾ ಇಲಾಖೆಯ ದರಿಯಾಪುರ ಅರಣ್ಯ ಪ್ರದೇಶದ ಗ್ರಾಮದಲ್ಲಿ ವಾಸವಾಗಿದ್ರು. ರಾಮ್‍ದೇವ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಶನಿವಾರ ಮಂಚದ ಕೆಳಗೆಯೇ ಮಲ ವಿಸರ್ಜನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಜಗದೀಶ್ ತಂದೆಯ ವಿರುದ್ಧ ಕೂಗಾಡಿದ್ದಾನೆ. ಇದೇ ವೇಳೆ ಕೊಡಲಿಯಿಂದ ತಂದೆಯ ಕತ್ತಿನ ಭಾಗಕ್ಕೆ ಹೊಡೆದಿದ್ದಾನೆ.

ತಂದೆಯ ನರಳಾಟ ಮತ್ತು ಕೂಗಾಟ ನೆರೆಹೊರೆಯವರಿಗೆ ಕೇಳಿಸಬಾರದೆಂದು ಮ್ಯೂಸಿಕ್ ಸಿಸ್ಟಮ್ ಆನ್ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ತಂದೆ ಒದ್ದಾಡುತ್ತಿದ್ದರೂ ಪತ್ನಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮಗನಿಂದ ಹಲ್ಲೆಗೊಳಾಗದ ರಾಮ್‍ದೇವ್ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ಜೋರಾದ ಮ್ಯೂಸಿಕ್ ನಡುವೆಯೂ ರಾಮ್‍ದೇವ್ ಧ್ವನಿ ಕೇಳಿದ ನೆರೆಯ ನಿವಾಸಿಗಳು ಬಾಗಿಲು ತೆರೆದು ನೋಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಮ್‍ದೇವ್ ರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪತ್ನಿಯೊಂದಿಗೆ ನಾಪತ್ತೆಯಾಗಿರುವ ಮಗ ಜಗದೀಶ್ ನಿಗಾಗಿ ಬಲೆ ಬೀಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ರಾಮ್‍ದೇವ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

Share This Article
Leave a Comment

Leave a Reply

Your email address will not be published. Required fields are marked *