ಅಂಗಡಿ ಜಾಗದಲ್ಲಿ ನಾನು ಇದ್ದಿದ್ದರೆ ಸಚಿವ ಸ್ಥಾನ ತಿರಸ್ಕರಿಸುತ್ತಿದ್ದೆ – ಎಂಬಿಪಿ

Public TV
1 Min Read

ವಿಜಯಪುರ: ಸಚಿವರಾದ ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿಗೆ ಕೇಂದ್ರ ಸರ್ಕಾರ ವ್ಯತ್ಯಾಸ ಮಾಡಿದೆ. ಇದು ಬಿಜೆಪಿಯ ಮನಸ್ಥಿತಿ ತೋರಿಸುತ್ತದೆ. ಇದು ಸರಿಯಾದ ನ್ಯಾಯವಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪಾಟೀಲ್ ಅವರು, ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿಗೆ ಮಾನದಂಡ ಬೇರೆ-ಬೇರೆಯಾಗಿದೆ. ಇಬ್ಬರು ನಾಲ್ಕು ಬಾರಿ ಗೆದ್ದು ಬಂದಿದ್ದು, ಅನುಭವ ಹೊಂದಿದ್ದಾರೆ. ಆದರೆ ಪ್ರಹ್ಲಾದ್ ಜೋಶಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದರೆ, ಸುರೇಶ್ ಅಂಗಡಿಯವರು ರಾಜ್ಯ ಸಚಿವರು. ಇಬ್ಬರು ಒಂದೇ ಸಮಾನವಾಗಿದ್ದರೂ ವ್ಯತ್ಯಾಸ ಮಾಡಿದ್ದಾರೆ. ಈ ವಿಚಾರವನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸುರೇಶ್ ಅಂಗಡಿಯವರಿಗೂ ಕ್ಯಾಬಿನೆಟ್ ದರ್ಜೆ ನೀಡಬೇಕಿತ್ತು. ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಇದು ಒಂದು ದೊಡ್ಡ ಅನ್ಯಾಯ. ಈ ಮೂಲಕ ಲಿಂಗಾಯತರಿಗೆ ಅಗೌರವ ತೋರಿಸಿದ್ದಾರೆ. ಇದನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಪಾಪ ಸುರೇಶ್ ಅಂಗಡಿಯವರು ಕೇಂದ್ರದ ರಾಜ್ಯ ಸಚಿವರು. ಅದಕ್ಕಾಗಿ ಪ್ರಹ್ಲಾದ್ ಜೋಶಿ ಕಡೆಗೆ ಅಂಗಡಿ ನೋಡಬೇಕು. ಸ್ವಾಭಿಮಾನವಿದ್ದರೆ ಸುರೇಶ್ ಅಂಗಡಿ ಜಾಗದಲ್ಲಿ ನಾನು ಇದ್ದಿದ್ದರೆ ಸಚಿವ ಸ್ಥಾನ ತಿರಸ್ಕಾರ ಮಾಡುತ್ತಿದ್ದೆ ಎಂದರು.

ಹಿಂದಿ ರಾಷ್ಟ್ರ ಭಾಷೆ, ಯಾವುದೇ ಒಂದು ಭಾಷೆಯನ್ನು ಹೇರುವಾಗ ಚರ್ಚೆ ಮಾಡಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸುವಂತಹ ಕರ್ತವ್ಯ ನಮ್ಮೆಲ್ಲರ ಜವಬ್ದಾರಿಯಾಗಿದೆ. ಹಿಂದಿ ಭಾಷೆಯನ್ನು ವ್ಯಾಪಕವಾಗಿ ಚರ್ಚೆ ನಡೆಸಿ ಅಭಿಪ್ರಾಯ ಕ್ರೋಢಿಕರಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *