ಶ್ರೀರಾಮುಲು ಜಡ್ಜ್ ಆಗಿ ಅಪಾಯಿಂಟ್ ಆಗಿರಬೇಕು: ಸಚಿವ ಡಿಕೆಶಿ ವ್ಯಂಗ್ಯ

Public TV
1 Min Read

ಗದಗ: ನನ್ನನ್ನು ಜೈಲಿಗೆ ಕಳುಹಿಸುತ್ತೀನಿ ಎನ್ನುತ್ತಿರುವ ಶಾಸಕ ಶ್ರೀರಾಮುಲು ಜಡ್ಜ್ ಆಗಿ ಅಪಾಯಿಂಟ್ ಆಗಿರಬೇಕೆಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿನ ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಕ್ಕ ಅವರನ್ನು ಪಾರ್ಲಿಮೆಂಟಿಗೆ ಕಳಿಸಲಿ, ನನ್ನನ್ನು ಜೈಲಿಗೆ ಕಳಿಸಲಿ ಎಂದು ಹೇಳುತ್ತಿರುವ ಶ್ರೀರಾಮಲು ಹೇಳಿಕೆ ಬಗ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉತ್ತರ ಕೊಡಬೇಕು. ಶ್ರೀರಾಮುಲು ಅವರು ಜಡ್ಜ್ ಆಗಿ ನೇಮಕವಾಗಿರಬೇಕು. ಜೈಲಿಗೆ ಕಳಿಸೋದು ಜಡ್ಜ್, ಅದಕ್ಕೆ ಈ ರೀತಿ ಹೇಳಿಕೆ ನೀಡಿರಬೇಕೆಂದು ಕಿಡಿಕಾರಿದರು.

ಶ್ರೀರಾಮುಲು ಅವರ ಹೇಳಿಕೆ ಪೂರ್ವ ನಿಯೋಜಿತ. ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅವರ ಕೈಯಲ್ಲಿದೆ. ನನ್ನನ್ನು ಜೈಲಿಗೆ ಕಳಿಸುವ ವಿಚಾರ ಮಾತನಾಡುತ್ತಾರೆ ಎಂದರೆ, ಅವರಿಗೆ ಆ ಅಧಿಕಾರ ಸಿಕ್ಕಿರಬೇಕು. ಅವರು ಸಂಸದರಾಗಿ ನಂತರ ಶಾಸಕರಾಗಿದ್ದವರು. ಅವರು ಬಹುಶಃ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿಕೊಂಡೇ ಆ ರೀತಿ ಹೇಳಿಕೆ ನೀಡಿರಬಹುದು ಎಂದು ಆರೋಪಿಸಿದ್ರು.

ಈ ಹಿಂದೆ 10 ವರ್ಷ ಅಣ್ಣ, ಅಕ್ಕ ಇಬ್ಬರೂ ಪಾರ್ಲಿಮೆಂಟಿನ ಸದಸ್ಯರಾಗಿದ್ದರು. ಆಗ ಅವರು ದೇಶದ ಒಳಿತಿಗೆ ಎಷ್ಟು ಪ್ರಶ್ನೆ ಕೇಳಿದ್ದರು. ಅದರ ಬಗ್ಗೆ ಬೇಕಾದರೆ ಒಂದು ದಾಖಲೆ ಬಿಡುಗಡೆ ಮಾಡಲಿ. ಒಂದು ವೇಳೆ ಶ್ರೀರಾಮುಲು ಅಣ್ಣಾವ್ರಿಗೆ ವಿಶ್ವಾಸ ಇದ್ದಿದ್ದರೆ, ಜನರಿಗೆ ತಾನು ಕೊಡುಗೆ ಕೊಟ್ಟಿದ್ದೀನಿ ಅಂತ ಅನ್ನಿಸಿದ್ದರೆ, ಅವರು ಬಳ್ಳಾರಿ ಗ್ರಾಮೀಣದಲ್ಲೇ ಸ್ಪರ್ಧೆ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದರು.

ಶ್ರೀರಾಮುಲು ಏನು ಹೇಳಿದ್ರು?
ಅಕ್ಟೋಬರ್ 13ರಂದು ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ, ಲೋಕಸಭಾ ಉಪಚುನಾವಣೆಯ ನಂತರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ ಜೈಲಿಗೆ ಹೋಗೋದು ಪಕ್ಕಾ. ನವೆಂಬರ್ 6ರ ನಂತರ ಅವರಿಗೆ ಜೈಲೇ ಗತಿ. ಡಿಕೆಶಿ ಮುಂದೆ ಇಲ್ಲಿರುತ್ತಾರೋ ಅಥವಾ ಜೈಲಿನಲ್ಲಿ ಇರುತ್ತಾರೋ ಅಂತಾ ಅವರ ಭವಿಷ್ಯ ಅವರಿಗೆ ಗೊತ್ತಿಲ್ಲ. ಅಂತವರು ಬಳ್ಳಾರಿ ಭವಿಷ್ಯ ನಿರ್ಧಾರ ಮಾಡುತ್ತಾರಾ? ನೀವು ಕನಕಪುರದಿಂದ ಬಂದು ಬಳ್ಳಾರಿ ಭವಿಷ್ಯ ಹೇಳ್ತೀರಾ ಎಂದು ಶ್ರೀರಾಮುಲು ಪ್ರಶ್ನಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *