ಮಯಾಂಕ್‌ ಅಗರ್ವಾಲ್‌ ಆರೋಗ್ಯ ಸ್ಥಿರ- ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ

Public TV
1 Min Read

– ನಿಮ್ಮ ಪ್ರೀತಿ, ಬೆಂಬಲ ಹಾಗೂ ಪ್ರಾರ್ಥನೆಗೆ ಧನ್ಯವಾದ ಅಂದ್ರು ಮಯಾಂಕ್

ನವದೆಹಲಿ: ಕರ್ನಾಟಕದ ರಣಜಿ ಕ್ಯಾಪ್ಟನ್‌ ಮಯಾಂಕ್‌ ಅಗರ್ವಾಲ್‌ (Mayank Agarwal) ಆರೋಗ್ಯ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ರಣಜಿ ಟೀಂ ಮ್ಯಾನೇಜರ್‌ ರಮೇಶ್‌ (Ranji Team Manager Ramesh) ಹೇಳಿದ್ದಾರೆ.

ಘಟನೆಯಲ್ಲಿ ಮಯಾಂಕ್‌ ಅವರು ಭಾರೀ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಪೊಲೀಸರು ಮಯಾಂಕ್‌ ಅವರ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರೆ

ಘಟನೆ ಸಂಬಂಧ ಅಗರ್ತಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆಯ ಬಗ್ಗೆ ನಮಗೆ ನಿಖರ ಮಾಹಿತಿ ಇಲ್ಲ. ಅಂದು ಏನಾಗಿದೆ ಅನ್ನೋದು ಗೊತ್ತಿಲ್ಲ. ಸದ್ಯ ನಾವು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ರಮೇಶ್‌ ಹೇಳಿದ್ದಾರೆ. ಈ ನಡುವೆ ಮಯಾಂಕ್‌ ಅವರು ಕೂಡ ತಾವು ಆಸ್ಪತ್ರೆಯಲ್ಲಿರುವ ಫೋಟೋದೊಂದಿಗೆ ಆರೋಗ್ಯ ಸುಧಾರಿಸುತ್ತಿದ್ದ, ನನಗೋಸ್ಕರ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ನಡೆದಿದ್ದೇನು..?: ಮಯಾಂಕ್‌ ಅವರು ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಅಂತೆಯೇ ವಿಮಾನದಲ್ಲಿ ಕುಳಿತಿದ್ದ ಮಯಾಂಕ್, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ದ್ರವ ಪದಾರ್ಥವನ್ನು ಸೇವಿಸಿದ್ದಾರೆ. ಇದನ್ನು  ಸೇವಿಸಿದ ಕೆಲ ಹೊತ್ತಿನ ಬಳಿಕ ಮಯಾಂಕ್ ಅವರಿಗೆ ಬಾಯಿ ಸುಟ್ಟ ಅನುಭವವಾಗಿದೆ. ನಂತರ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

Share This Article