ಮಲೆಮಹದೇಶ್ವರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ

Public TV
2 Min Read

ಚಾಮರಾಜನಗರದ: ನಗರದ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ (Male Mahadeshwara Hill) ಅಭಿವೃದ್ಧಿಗೆ (Development) ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ರಚಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಂಗಳವಾರ ತಿಳಿಸಿದ್ದಾರೆ.

ಬೊಮ್ಮಾಯಿ ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮಲೆಮಹದೇಶ್ವರದಲ್ಲಿ ಮಹದೇಶ್ವರ ಪ್ರಾಧಿಕಾರದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬೆಟ್ಟಕ್ಕೆ ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದು, ಪ್ರತಿದಿನ 10-20 ಸಾವಿರ ಜನರು ಭೇಟಿ ನೀಡುತ್ತಿದ್ದಾರೆ. ಅಮಾವಾಸ್ಯೆ, ಹುಣ್ಣಿಮೆ ದಿನಗಳಂದು, ವಾರಾಂತ್ಯಗಳಲ್ಲಿ ಇನ್ನೂ ಹೆಚ್ಚಾಗಿ ಬರುತ್ತಾರೆ. ಜಾತ್ರೆಗಳು ನಡೆಯುವ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಇಲ್ಲಿ 159 ಎಕರೆ ಪ್ರದೇಶವಿದ್ದು, ಇನ್ನೂ 70 ಎಕರೆ ಬಳಕೆಯಾಗಿಲ್ಲ. 80 ಎಕರೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್‌ಗಳನ್ನು ತೆಗೆದು ಏನು ಮಾಡಲು ಸಾಧ್ಯವಿದೆ ಎಂದು ಪರಿಶೀಲಿಸಲಾಗುತ್ತದೆ. ಮೂಲ ದೇವಸ್ಥಾನದ 70 ಎಕರೆಗೆ ಮಾಸ್ಟರ್ ಪ್ಲಾನ್ ರಚಿಸಿ ಯೋಜನಾಬದ್ಧವಾಗಿ ಅನುಷ್ಠಾನ ಗೊಳಿಸಬೇಕು. ಬಡಜನರು ಇಲ್ಲಿಗೆ ಹೆಚ್ಚು ಬರುವುದರಿಂದ ಡಾರ್ಮಿಟರಿಗಳನ್ನು ನಿರ್ಮಿಸಬೇಕು. ಸುಮಾರು 5 ಸಾವಿರ ಜನರು ಒಂದೇ ಬಾರಿಗೆ ಉಳಿದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಲಾಗಿದೆ ಎಂದರು.

ಮೂರ್ತಿ ಅನಾವರಣ:
ಮಲೆಮಹದೇಶ್ವರನ ಮೂರ್ತಿ ಪೂರ್ಣಗೊಂಡಿದ್ದು, ಅದು ಮುಂದಿನ ತಿಂಗಳು ಅನಾವರಣವಾಗಲಿದೆ. ಹಲವಾರು ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಸಂಪರ್ಕ ರಸ್ತೆಗೆ 100 ಕೋಟಿ:
ಮಲೆಮಹದೇಶ್ವರ ಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಬಹಳ ಪ್ರಮುಖವಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಪ್ರದೇಶಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು 100 ಕೋಟಿ ರೂ. ಮಲೆಮಹದೇಶ್ವರ ಬೆಟ್ಟ ಹಾಗೂ ಕ್ಷೇತ್ರದ ಎರಡೂ ಬದಿಗಳಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಹಣವನ್ನು ನೀಡಲಾಗುವುದು. ಒಟ್ಟಾರೆ ಮಲೆಮಹದೇಶ್ವರ ಬೆಟ್ಟದ ಯೋಜನಾಬದ್ಧವಾದ ಅಭಿವೃದ್ಧಿ ಸರ್ಕಾರದ ಮುಂದಿರುವ ಗುರಿಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಕ್ಷೇತ್ರದಲ್ಲಿ ಭಕ್ತಾದಿಗಳ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಶ್ರೀ ಕ್ಷೇತ್ರದಲ್ಲಿ ದೇವರ ಸನ್ನಿಧಾನಕ್ಕೆ ಸಾಲುಗಟ್ಟಿ ನಿಲ್ಲುವ ಭಕ್ತರಿಗೆ ನೆರಳು ಹಾಗೂ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಅನುಮೋದನೆಯನ್ನು ನೀಡಲಾಗಿದೆ ಎಂದರು. ಇದನ್ನೂ ಓದಿ: ಚಾಮರಾಜನಗರಕ್ಕೆ ಹೋಗಬಾರದು ಅಂತಾರೆ, ಇಲ್ಲಿಗೆ ಬಂದಿರುವ ನಾನೇ ಪುಣ್ಯವಂತ: ಬೊಮ್ಮಾಯಿ‌

ಹುಲಿ ಯೋಜನೆ:
ಹುಲಿ ಯೋಜನೆಯ ಪ್ರಸ್ತಾಪ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಇಲ್ಲಿನ ಜನವಸತಿಗೆ ಯಾವುದೇ ರೀತಿಯ ತೊಂದರೆಯಾಗುವ ಬಗ್ಗೆ ಕೆಲವು ಸಂದೇಹಗಳು ವ್ಯಕ್ತವಾಗಿದೆ. ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.

ಗಡಿ ವಿಚಾರ – ರಾಜ್ಯ ಅಚಲ ನಿಲುವು:
ನಾಳೆ ನವದೆಹಲಿಯ ಪ್ರವಾಸ ಕೈಗೊಳ್ಳುತ್ತಿದ್ದು, ಗಡಿ ವಿಚಾರದ ಬಗ್ಗೆ ಚರ್ಚಿಸಲು ಬೆಳಗಾವಿ ಉಸ್ತುವಾರಿ ಸಚಿವರು, ಎಜಿ, ಗೃಹಸಚಿವರು ಇರಲಿದ್ದಾರೆ. ರಾಜ್ಯ ಪುನರ್‌ರಚನೆ ನಂತರದ ಎಲ್ಲಾ ಬೆಳವಣಿಗೆಗಳು, ಗಡಿಗಳ ಬಗ್ಗೆ ರಾಜ್ಯದ ಅಚಲವಾದ ನಿಲುವನ್ನು ನಾಳಿನ ಸಭೆಯಲ್ಲಿ ಪುನಃ ಪ್ರತಿಪಾದಿಸಲಾಗುವುದು ಎಂದರು. ಇದನ್ನೂ ಓದಿ: ಡಿಸೆಂಬರ್ 15ಕ್ಕೆ ಜೆಪಿ ನಡ್ಡಾ ರಾಜ್ಯಕ್ಕೆ ಎಂಟ್ರಿ – 10 ಜಿಲ್ಲೆಗಳಲ್ಲಿ ಪಕ್ಷದ ನೂತನ ಕಾರ್ಯಾಲಯಗಳ ಉದ್ಘಾಟನೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *