ಕೇಂದ್ರ ಸಚಿವರ ಎಡವಟ್ಟು- ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ

Public TV
1 Min Read

ಗದಗ: ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದಾಗಿ, ಕರ್ತವ್ಯ ನಿರತ ಯೋಧನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿರುವ ಘಟನೆ ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

ಗುರುವಾರ ರಾತ್ರಿ ಗದಗನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಜನಾಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮುಳಗುಂದ ಪಟ್ಟಣದ ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿಬರುವ ಪ್ಲಾನ್ ಹಾಕಿಕೊಂಡಿದ್ದರು. ಈ ವೇಳೆ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಮಾಹಿತಿ ಕೊರತೆಯಿಂದಾಗಿ ಎಡವಟ್ಟಾಗಿದೆ. ಇದನ್ನೂ ಓದಿ: ಭಾರೀ ಮೊತ್ತಕ್ಕೆ ಕೆಜಿಎಫ್ ಸ್ಯಾಟಲೈಟ್ ಹಕ್ಕು ಖರೀದಿಸಿದ ಜೀ ಸ್ಟುಡಿಯೋಸ್

ಒಂದೂವರೆ ವರ್ಷದ ಹಿಂದೆ ಮುಳಗುಂದ ಪಟ್ಟಣದ ಯೋಧ ಬಸವರಾಜ್ ಹಿರೇಮಠ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಸವರಾಜ್ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕಿತ್ತು. ಆದರೆ ಸ್ಥಳೀಯ ಕಾರ್ಯಕರ್ತರ ಎಡವಟ್ಟಿನಿಂದ ಸದ್ಯ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಯೋಧ ರವಿಕುಮಾರ್ ಹನುಮಂತಪ್ಪ ಕಟ್ಟಿಮನಿ ಅವರ ಮನೆಗೆ ಭೇಟಿ ನೀಡಿದ್ದರು.

ಕುಟುಂಬದವರ ಯೋಗಕ್ಷೇಮ ವಿಚಾರಿಸಿ, ಕರ್ತವ್ಯ ನಿರತ ಸೈನಿಕನ ಪತ್ನಿಗೆ ಸರ್ಕಾರಿ ಕೆಲಸ ಹಾಗೂ ಕುಟುಂಬಕ್ಕೆ ಜಮೀನು ಕೊಡುವ ಭರವಸೆಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೀಡಿದ್ದರು. ಕೇಂದ್ರ ಸಚಿವರ ತರಾತುರಿ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಸ್ಥಳೀಯ ಕಾರ್ಯಕರ್ತರು ಮಾಡಿದ ಎಡವಟ್ಟಿನಿಂದ ಕೇಂದ್ರ ಸಚಿವರು ಪೇಚಿಗೆ ಸಿಲುಕಿದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *