ಬೆಂಗಳೂರು: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಮಹಿಳೆ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಾಂತಿ (29) ಬಂಧಿತ ಮಹಿಳೆಯಾಗಿದ್ದು, ಈಕೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿ ಕಣ್ಣಪ್ಪನನ್ನು ಕೊಲೆ ಮಾಡಿದ್ದಳು. ಗಂಡನನ್ನು ಕೊಲೆ ಮಾಡಲು ಶಾಂತಿ ಆತನ ಪ್ರಿಯಕರ 18 ವರ್ಷದ ಕಹಿಮುದ್ದೀನ್ಗೆ ಸಹಕಾರ ನೀಡಿದ್ದಳು.
ಜೂನ್ 22 ರಂದು ನಗರದ ಕೂಡ್ಲುಗೇಟ್ ಬಳಿ ಕಣ್ಣಪ್ಪನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆತನ ಗುರುತು ಪತ್ತೆ ಮಾಡಿದ್ದರು. ಆ ಬಳಿಕ ಕೊಲೆ ಹಿಂದಿನ ರಹಸ್ಯ ತನಿಖೆ ಮುಂದುವರಿಸಿದ ಪೊಲೀಸರು ಕಣ್ಣಪ್ಪನ ಪತ್ನಿ ಶಾಂತಿ ಹಾಗೂ ಕಹಿಮುದ್ದೀನ್ನನ್ನು ಬಂಧಿಸಿದ್ದಾರೆ.
ಕಹಿಮುದ್ದೀನ್ ಮೂಲತಃ ಅಸ್ಸಾಂನಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಫ್ಲೈವುಡ್ ಕೆಲಸ ಮಾಡುತ್ತಿದ್ದ ಆರೋಪಿ ನಗರದ ಕೂಡ್ಲುಗೇಟ್ ಬಳಿ ವಾಸವಿದ್ದ. ಈತ ಮನೆ ಕೆಲಸ ಮಾಡುತ್ತಿದ್ದ ಶಾಂತಿಯೊಂದಿಗೆ ಕಹಿಮುದ್ದೀನ್ಗೆ ಪರಿಚಯವಾಗಿ ಸ್ನೇಹವಾಗಿತ್ತು. ಆ ಬಳಿಕ ಇಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟ್ಟಿತ್ತು. ಈ ವಿಚಾರ ತಿಳಿದ ಕಣ್ಣಪ್ಪ ಮನೆಯಲ್ಲಿ ಪತ್ನಿಯನ್ನು ಪ್ರಶ್ನಿಸಿ ಎಚ್ಚರಿಕೆ ನೀಡಿದ್ದ. ಇದರಿಂದ ಪತಿಯನ್ನೇ ಮುಗಿಸಲು ಸ್ಕೇಚ್ ಹಾಕಿದ್ದ ಶಾಂತಿ, ಕಹಿಮುದ್ದೀನ್ ನೊಂದಿಗೆ ಸೇರಿ ಕಣ್ಣಪ್ಪನನ್ನು ಕೊಲೆ ಮಾಡಿದ್ದಳು. ಸದ್ಯ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.