ಮದ್ವೆಯಾಗಿ ಮಗುವಿದ್ರೂ ಯುವತಿಯ ಜೊತೆ ಸಂಬಂಧ – ಕೊನೆಗೆ ಸ್ನೇಹಿತೆಯನ್ನು ಕೊಂದು ಸಿಕ್ಕಿಬಿದ್ದ!

Public TV
1 Min Read

ನವದೆಹಲಿ: ವಿವಾಹಿತ ವ್ಯಕ್ತಿಯೊಬ್ಬ ತನ್ನ ಸ್ನೇಹಿತೆಯನ್ನು ಕೊಲೆ ಮಾಡಿ, ಮೃತ ದೇಹವನ್ನು ಮಣ್ಣು ಮಾಡಲು ಯತ್ನಿಸುವಾಗ ಸಿಕ್ಕಿ ಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

32 ವಯಸ್ಸಿನ ವ್ಯಕ್ತಿ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ 28 ವರ್ಷದ ಯುವತಿಯ ಮೃತದೇಹವನ್ನು ಮಣ್ಣು ಮಾಡಲು ಯತ್ನಿಸಿದ್ದು, ಅಲ್ಲಿ ಸಿಕ್ಕಿ ಬಿದ್ದಿದ್ದಾನೆ. ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಆರೋಪಿ ಮರಗೆಲಸ ಮಾಡುತ್ತಿದ್ದು, ಈಗಾಗಲೇ ಮದುವೆಯಾಗಿ 3 ವರ್ಷದ ಮಗು ಕೂಡ ಇದೆ. ಆದರೆ ಈಗ 28 ವಯಸ್ಸಿನ ಯುವತಿಯ ಜೊತೆ ಲಿವ್ ಇನ್ ರಿಲೆಷನ್‍ಶಿಪ್ ನಲ್ಲಿ ಇದ್ದನು. ಈ ಬಗ್ಗೆ ಪತ್ನಿಗೆ ತಿಳಿದಿದ್ದು, ಸ್ನೇಹಿತೆಯ ಜೊತೆ ಜಗಳ ಮಾಡಿದ್ದಾರೆ. ಆಗ ಮೃತ ಯುವತಿ ಮದುವೆಯಾಗುವಂತೆ ಆರೋಪಿಯನ್ನು ಒತ್ತಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿದಿನ ಗೆಳತಿ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಜನವರಿ 22 ರಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಒಂದು ಬಟ್ಟೆಯಲ್ಲಿ ಸುತ್ತಿ ಮಣ್ಣು ಮಾಡಲು ನಿರ್ಧರಿಸಿದ್ದ. ಆದರೆ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ಪೊಲೀಸರು ವಿಶೇಷ ಭದ್ರತೆ ಆಯೋಜಿಸಿದ್ದರು. ಇದರಿಂದ ಮೃತದೇಹವನ್ನು ಮಣ್ಣು ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಒಂದು ಕಾರು ಬುಕ್ ಮಾಡಿ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿರುವ ಖಾತ್ರಿಯಾನ್ ಎಂಬ ಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾನೆ. ಅಲ್ಲಿ ಮೃತ ಯುವತಿಯನ್ನು ಸಮಾಧಿ ಮಾಡುವಾಗ ಅಲ್ಲಿನ ನಿವಾಸಿಗಳ ಗಮನಿಸಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ಪ್ರಶ್ನೆ ಮಾಡಿದ್ದಾರೆ. ಆಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ನಡೆದ ಘಟನೆಯ ವಿವರನ್ನು ತಿಳಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *