ಶೃಂಗೇರಿಯ ವಿವಾಹಿತ ಪ್ರೇಮಿಗಳು ಕುಂದಾಪುರದಲ್ಲಿ ಆತ್ಮಹತ್ಯೆ

Public TV
2 Min Read

ಉಡುಪಿ: ಅಕ್ರಮ ಸಂಬಂಧ ಅಕ್ರಮವಲ್ಲ, ಅಪರಾಧವಲ್ಲ ಅಂತ ಬೆರಳೆಣಿಕೆ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ತೀರ್ಪು ಬಂದ ಎರಡು ದಿನಕ್ಕೆ ಶೃಂಗೇರಿಯ ವಿವಾಹಿತ ಪ್ರೇಮಿಗಳು ಉಡುಪಿಯ ಕುಂದಾಪುರದ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಸಿಂಧುವಳ್ಳಿ ಗ್ರಾಮದ ಗುರುಮೂರ್ತಿ (48) ಮತ್ತು ನೇತ್ರವಳ್ಳಿ ಗ್ರಾಮದ ಶಾರದಾ (30) ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಪ್ರೇಮಿಗಳು. ಘಟನಾ ಸ್ಥಳದಲ್ಲಿ ಶಾರದಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ನಮ್ಮ ಸಾವಿಗೆ ನನ್ನ ಗಂಡ ರಮೇಶ ಕಾರಣ ಅಂತ ಬರೆದುಕೊಂಡಿದ್ದಾಳೆ. ಬೇಸಾಯ ಮಾಡುತ್ತಿದ್ದ ಗುರುಮೂರ್ತಿಗೆ ಪುತ್ರಿಯಿದ್ದಾಳೆ. ಅವರು ತನ್ನ ಪತ್ನಿ ಮತ್ತು ಪುತ್ರಿಯನ್ನು ತೊರೆದು ಶಾರದಾ ಜೊತೆಗೆ ಬಂದಿದ್ದ. ಶಾರದಾಗೂ ಪತಿ ಮತ್ತು ಒಬ್ಬಳು ಮಗಳು ಇದ್ದು ಅವರಿಬ್ಬರನ್ನು ಬಿಟ್ಟು ಬಂದಿದ್ದಳು.

ನಡೆದದ್ದು ಏನು?
ಸಪ್ಟೆಂಬರ್ 26ರಂದು ಶೃಂಗೇರಿಯ ಉಡುಪಿಯ ಕುಂದಾಪುರಕ್ಕೆ ಬಂದಿದ್ದ ಈ ಜೋಡಿ, ನಾಲ್ಕು ದಿನಕ್ಕಾಗಿ ಹರಿಪ್ರಸಾದ್ ಲಾಡ್ಜ್ ನಲ್ಲಿ ಕೊಠಡಿ ಪಡೆದಿತ್ತು. ಸುತ್ತಮುತ್ತ ಓಡಾಡಿಕೊಂಡು ಮತ್ತೆ ಬಂದು ಲಾಡ್ಜ್ ನಲ್ಲಿ ತಂಗುತ್ತಿದ್ದರು. ಆದರೆ ಕಳೆದ ರಾತ್ರಿಯಿಂದ ಕೊಠಡಿ ಬಂದ್ ಇತ್ತು. ಸಂಜೆಯವರೆಗೆ ಬಾಗಿಲು ತೆಗೆಯದ ಕಾರಣ ಲಾಡ್ಜ್ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿ, ಬಾಗಿಲು ಒಡೆದಿದ್ದಾರೆ. ಈ ಸಂದರ್ಭ ಎರಡು ಮೃತದೇಹಗಳು ಕಂಡುಬಂದಿದೆ. ಗುರುಮೂರ್ತಿ ಮೃತದೇಹ ಬೆಡ್ ಮೇಲಿದ್ದರೆ, ಶಾರದಾ ದೇಹ ಕೆಳಗೆ ಮಲಗಿದ ಸ್ಥಿತಿಯಲ್ಲಿತ್ತು.

ಮದ್ಯಕ್ಕೆ ಕೀಟನಾಶಕ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಕೊಠಡಿಯೊಳಗೆ ವಿಷದ ಬಾಟಲಿ ಮತ್ತು ಮದ್ಯದ ಬಾಟಲಿ ಸಿಕ್ಕಿದೆ. ಸ್ಥಳದಲ್ಲಿ ಶಾರದಾ ಬರೆದಿರುವ ಡೆತ್ ನೋಟ್ ಸಿಕ್ಕಿದೆ. ನಮ್ಮ ಸಾವಿಗೆ ನನ್ನ ಗಂಡ ರಮೇಶ ಕಾರಣ ಅಂತ ಬರೆದುಕೊಂಡಿದ್ದಾಳೆ.

ಗುರುಮೂರ್ತಿ ಹಾಗೂ ಶಾರದಾ ಪ್ರೀತಿಗೆ, ಅಕ್ರಮ ಸಂಬಂಧಕ್ಕೆ ಶಾರದಾ ಗಂಡ ರಮೇಶ ತಡೆಯೊಡ್ಡಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಗಲಾಟೆಯಾಗಿದೆ ಅಂತ ಮೃತರ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ರಮೇಶನ ವಿರುದ್ಧ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *