ಧಾರವಾಡ: ಪತಿ ಎರಡನೇ ಮದುವೆ ಮಾಡಿಕೊಂಡಿದ್ದಾನೆ ಎಂದು ತಿಳಿದ ಮೊದಲನೇ ಪತ್ನಿ, ಪತಿ ಹಾಗೂ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಣೇಶನಗರದ ಅಲಾವುದ್ದೀನ್ ಬಳೆಗಾರ ಹಲ್ಲೆಗೆ ಒಳಗಾದ ಪತಿರಾಯ. ಈತ 7 ವರ್ಷಗಳ ಹಿಂದೆ ಧಾರವಾಡ ನಗರದ ಮನಕಿಲ್ಲಾ ಬಡಾವಣೆಯ ಜಾಹಿದಾ ಅವರನ್ನು ಮದುವೆಯಾಗಿದ್ದನು. ಅಲಾವುದ್ದೀನ್ ಕಂಪ್ಯೂಟರ್ ಕ್ಲಾಸನ್ನು ನಡೆಸುತ್ತಿದ್ದನು. ಈ ದಂಪತಿಗೆ ಒಂದು ಮಗು ಕೂಡಾ ಇದ್ದು, ಇವರಿಬ್ಬರ ನಡುವೆ ಸಂಸಾರ ಚೆನ್ನಾಗಿ ನಡೆಯದ ಕಾರಣ ಇಬ್ಬರು ಬೇರೆಯಾಗಿದ್ದರು.
ಒಂದು ವಾರದ ಹಿಂದೆ ಅಲಾವುದ್ದೀನ್ ಮುಬಿನ್ ಎಂಬವಳನ್ನ ಎರಡನೇ ಮದುವೆ ಮಾಡಿಕೊಂಡಿದ್ದನು. ಇದನ್ನು ತಿಳಿದ ಮೊದಲ ಪತ್ನಿ ಜಾಹಿದಾ, ತನ್ನ ಕುಟುಂಬದವರನ್ನು ಕರೆ ತಂದು ಪತಿ ಹಾಗೂ ಎರಡನೇ ಪತ್ನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಇಬ್ಬರು ಪತ್ನಿಯರೂ ಹೊಡೆದಾಡಿಕೊಳ್ಳುವಾಗ ಅಲಾವುದ್ದೀನ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾನೆ. ಆಗ ಅಲಾವುದ್ದೀನ್ ಹೊಡಸಿಕೊಂಡ ದೃಶ್ಯ ಆತ ನಡೆಸುತ್ತಿದ್ದ ಕಂಪ್ಯೂಟರ್ ಕ್ಲಾಸಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ನನಗೆ ಜೀವ ಭಯವಿದೆ ಎಂದು ಅಲಾವುದ್ದೀನ್ ಹೇಳಿದ್ದಾನೆ. ಮತ್ತೊಂದು ಕಡೆ ಎರಡನೇ ಪತ್ನಿಯ ಮನೆಯವರು ಕೂಡಾ ಅಲಾವುದ್ದೀನ್ ತಮ್ಮ ಮಗಳನ್ನ ಕಿಡ್ನಾಪ್ ಮಾಡಿದ್ದಾನೆ ಎಂದು ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮನೆಯಿಂದ ತನ್ನ ಎರಡನೇ ಪತ್ನಿ ಜೊತೆ ಹೊರಗಡೆ ಅಲೆದಾಡುತ್ತಿರುವ ಅಲಾವುದ್ದೀನ್ ಅಜ್ಞಾತ ಸ್ಥಳಕ್ಕೆ ಹೋಗಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv