ತಾಳಿ ಕಟ್ಟೋ ಸಮಯಕ್ಕೆ ವರನ ಅರಚಾಟ, ಚೀರಾಟಕ್ಕೆ ಮದುವೆಯೇ ಕ್ಯಾನ್ಸಲ್ ಆಯ್ತು!

Public TV
1 Min Read

ತಿರುವನಂತಪುರ: ತಾಳಿ ಕಟ್ಟೋ ವೇಳೆ ಕಲ್ಯಾಣ ಮಂಟಪದಲ್ಲಿ ವರನ ಚೀರಾಟ, ಅರಚಾಟದಿಂದಾಗಿ ಮದುವೆ ಮುರಿದು ಬಿದ್ದ ಘಟನೆ ಕೇರಳದ ವಿತುರ ಎಂಬಲ್ಲಿ ನಡೆದಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಯುವಕ ನಿನ್ನೆ ಹಿರಿಯರು ನಿಶ್ಚಯಿಸಿದ್ದ ಹುಡುಗಿಗೆ ತಾಳಿ ಕಟ್ಟಬೇಕಿತ್ತು. ಆದರೆ ವಧುವನ್ನು ಮದುವೆ ಮಾಡಿಸಿಕೊಡಲು ಹುಡುಗಿ ಕಡೆಯವರು ಬಂದ ವೇಳೆ ವರ ವಿಚಿತ್ರವಾಗಿ ವರ್ತಿಸಿದ್ದಾನೆ.

ವಧುವನ್ನು ನೋಡುತ್ತಿದ್ದಂತೆ ಆತ ಹೂಗಳನ್ನು ಮಂಟಪ ತುಂಬಾ ಚೆಲ್ಲಿದ್ದಾನೆ. ಜೊತೆಗೆ ವಿಚಿತ್ರವಾಗಿ ಅರಚಾಡುತ್ತಾ ಅಟ್ಟಹಾಸಗೈದಿದ್ದಾನೆ. ಇದನ್ನೆಲ್ಲಾ ನೋಡಿ ಮದುವೆಗೆ ಬಂದವರು ಮೂಕವಿಸ್ಮಿತರಾಗಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ವಧುವಿನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮದುವೆಯಲ್ಲಿ ಭಾಗಿಯಾಗಲು ಬಂದವರು ಹೇಳಿದ್ದಾರೆ.

ಎಸ್.ಐ ನೇತೃತ್ವದಲ್ಲಿ ಬಂದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ನಡೆದ ಘಟನೆಯ ವಿವರ ಸಂಗ್ರಹಿಸಿದ್ದಾರೆ. ಬಳಿಕ ವಧು ಹಾಗೂ ವರನ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾತುಕತೆ ಯಾವುದೇ ಸಫಲತೆ ಕಾಣಲಿಲ್ಲ. ವಧುವಿನ ಮನೆಯವರು ನಾವು ಯಾವುದೇ ಕಾರಣಕ್ಕೂ ಹುಡುಗಿಯನ್ನು ಆತನ ಜೊತೆ ಮದುವೆ ಮಾಡಿಸಲ್ಲ ಎಂದು ಹೇಳಿದ್ದಾರೆ. ನಾವು ವಧುವಿನ ಮನೆಯವರ ನಿರ್ಧಾರವನ್ನು ಬೆಂಬಲಿಸಿದ್ದೇವೆ ಎಂದು ವಿತುರ ಎಸ್.ಐ. ಎಸ್.ಎಲ್.ಪ್ರೇಮ್ ಲಾಲ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *