ಉಡುಪಿ: ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಎಂದರೆ ಸಾಕು ಕುಟುಂಬದವರ ಜೊತೆ ಸೇರಿ ಕೇಕ್ ಕಟ್ ಮಾಡಿ, ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಾರೆ. ಆದರೆ ಉಡುಪಿಯಲ್ಲೊಬ್ಬರು ವಿಭಿನ್ನವಾಗಿ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡಿದ್ದಾರೆ.
ಉಡುಪಿ ನಿವಾಸಿ ಶಶಿಧರ್ ಭಟ್ ತಮ್ಮ 25ನೇ ಮದುವೆ ವಾರ್ಷಿಕೋತ್ಸವವನ್ನು ಜಿಲ್ಲೆಯ ಬ್ರಹ್ಮಾವರದ ನೀಲಾವರ ಗೋವು ಶಾಲೆಯಲ್ಲಿ ಆಚರಣೆ ಮಾಡಿದ್ದಾರೆ. ಶಶಿಧರ್ ಭಟ್ ಅವರು ಯುವ ಬ್ರಾಹ್ಮಣ ಪರಿಷತ್ ಜೊತೆ ಸೇರಿ ಸುಮಾರು 1,500 ಹಸುಗಳಿಗೆ ಗೋಗ್ರಾಸ ನೀಡುವ ಮೂಲಕ ವಿಭಿನ್ನವಾದ ಒಂದು ಸೇವೆಯನ್ನು ಮಾಡಿದ್ದಾರೆ.
ಶಶಿಧರ್ ಅವರು ಹಸುಗಳಿಗೆ ಹೊಟ್ಟೆ ತುಂಬಾ ರುಚಿಕರವಾದ ಆಹಾರ ಕೊಟ್ಟಿದ್ದಾರೆ. ಇದಕ್ಕಾಗಿ ಸುಮಾರು 60 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದೊಂಥರಾ ದೇವರ ಸೇವೆ ಎಂಬುದು ಅವರ ನಂಬಿಕೆಯಾಗಿದೆ ಎಂದು ಸ್ಥಳೀಯ ವಿಷ್ಣು ಪಾಡಿಗಾರ್ ಹೇಳಿದ್ದಾರೆ.
ಹುಟ್ಟಿದ ಹಬ್ಬ ಆಚರಣೆ, ವಾರ್ಷಿಕೋತ್ಸವ ಆಚರಣೆ ಅಂತ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದೇ ದುಡ್ಡನ್ನು ಹೀಗೂ ಖರ್ಚು ಮಾಡಬಹುದು ಅನ್ನೋದನ್ನು ಭಟ್ ಮತ್ತು ಅವರ ತಂಡ ತೋರಿಸಿಕೊಟ್ಟಿದ್ದಾರೆ. ನೀಲಾವರ ಗೋಶಾಲೆಗೆ ಗೆಳೆಯರ ಬಳಗ ವಾರ್ಷಿಕೋತ್ಸವ ಹಿಂದಿನ ದಿನ ತೆರಳಿ ಆಹಾರ ತಯಾರಿಯ ಸಿದ್ಧತೆ ಮಾಡಿದ್ದರು. ಮಧ್ಯಾಹ್ನಕ್ಕೆ ಹೊಂದುವಂತೆ ಹಿಂಡಿ, ಅನ್ನ, ಬಿಸಿಬಿಸಿ ಹುರುಳಿ, ಹೀಗೆ ಎಲ್ಲಾ ಆಹಾರವನ್ನು ಕಲಸಿ ಗೋಗ್ರಾಸ ಸಿದ್ಧಪಡಿಸಲಾಗಿತ್ತು. ಗೋಶಾಲೆಯ 1500ಕ್ಕೂ ಹೆಚ್ಚು ಹಸುಗಳಿಗೆ ವಿತರಿಸಲಾಗಿದೆ. ಈ ಕಾರ್ಯಕ್ರಮ ಸಾಕಷ್ಟು ಮಂದಿಗೆ ಪ್ರೇರಣೆಯಾಗಿದೆ ಎಂದು ಸ್ಥಳೀಯ ನಿವಾಸಿ ದಿವ್ಯ ಭಟ್ ತಿಳಿಸಿದ್ದಾರೆ.
ಗೋಶಾಲೆ ನಿರ್ವಹಣೆಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚಿದೆ. ಪಾರ್ಟಿ, ಸಮಾರಂಭ ಅಂತ ಸುಮ್ಮನೆ ದುಂದು ವೆಚ್ಚ ಮಾಡುವವರು ಮೂಕಪ್ರಾಣಿಗಳ ಜೊತೆ ಸಂಭ್ರಮ ಆಚರಿಸಬಹುದು ಎಂಬುದನ್ನು ಶಶಿಧರ್ ಭಟ್ ತಿಳಿಸಿಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv