ಗ್ರಾಹಕರಿಗೆ ಗುಣಮಟ್ಟದ ಮಾವು ಪರಿಚಯಿಸಲು `ಮ್ಯಾಂಗೋ ಟೂರಿಸಂ’

Public TV
2 Min Read

ಧಾರವಾಡ: ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವು ಲಗ್ಗೆ ಇಡುತ್ತಿರುವ ಹೊತ್ತಿನಲ್ಲಿ ಸ್ಥಳೀಯ ಮಾರುಕಟ್ಟೆ ಉತ್ತೇಜಿಸಲು ಹಾಗೂ ಕೃಷಿ ಪ್ರವಾಸೋದ್ಯಮ ಪ್ರೋತ್ಸಾಹಿಸಲು ನಗರವಾಸಿಗಳ ಗ್ರಾಹಕರಿಗಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಗುಣಮಟ್ಟದ ಮಾವು ಪರಿಚಯಿಸಲು ಶುಕ್ರವಾರ `ಮ್ಯಾಂಗೋ ಟೂರಿಸಂ’ ಹಮ್ಮಿಕೊಂಡಿತ್ತು.

ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ನಿಗಮದಿಂದ ಹಮ್ಮಿಕೊಂಡ ಈ ಟೂರಿಸಂನಲ್ಲಿ ಒಳ್ಳೆಯ ಗುಣಮಟ್ಟದ ಮಾವಿನಹಣ್ಣು ಬೆಳೆಯುತ್ತಿರುವ ರೈತರನ್ನು ಗುರುತಿಸಿ, ನಗರದ ಗ್ರಾಹಕರನ್ನು ಆಯ್ದ ಬೆಳೆಗಾರರ ತೋಟಗಳಿಗೆ ಕರೆದೊಯ್ದು ತಾಜಾ ಮಾವಿನ ಹಣ್ಣಿನ ಬೆಳೆಗಾರರ ತೋಟದಲ್ಲಿಯೇ ಖರೀದಿಸಲು ಮ್ಯಾಂಗೋ ಟೂರಿಸಂ ಸಹಕಾರಿಯಾಯಿತು.

ತಾಲೂಕಿನ ಕಲಕೇರಿ ಮಾವು ಬೆಳೆಗಾರ ದೇವೇಂದ್ರ ಜೈನ್ ಅವರ ತೋಟಕ್ಕೆ ಭೇಟಿ ನೀಡಿದ ನಗರವಾಸಿಗಳು ಆಲ್ಪಾನ್ಸೋ ಮಾವಿನ ಹಣ್ಣಿನ ತಳಿಯ ಕುರಿತು ಮಾಹಿತಿ ಪಡೆದರು. ಅಲ್ಲದೇ, ಮಾವಿನ ಗಿಡದಲ್ಲಿನ ಕಾಯಿಗಳ ಜತೆಗೆ ಸೆಲ್ಫಿ ತೆಗೆದುಕೊಂಡರು. ಈ ವೇಳೆ ಮಾವಿನ ತಳಿ, ಮಾವು ಮಾಗುವ ರೀತಿ, ಗಾತ್ರ, ಬಣ್ಣ, ರುಚಿ, ಕತ್ತರಿಸುವ ವಿಧಾನದ ಕುರಿತು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಶೈಲ್ ದಿಡ್ಡಿಮನಿ ಗ್ರಾಹಕರಿಗೆ ಮಾಹಿತಿ ನೀಡಿದ್ರು.

ಮಾರಕಟ್ಟೆಯಲ್ಲಿ ರಾಸಾಯಿನಿಕ ಮಿಶ್ರಿತ ಮಾವು ಬರುತ್ತಿರುವ ಕಾರಣ ನೈಸರ್ಗಿಕ ಮಾವು ಹಾಗೂ ರೈತರ ಸ್ಥಿತಿಗತಿ ನಗರವಾಸಿಗಳಿಗೆ ಪರಿಚಯಿಸಲು, ಗುಣಮಟ್ಟದ ಮಾವಿನ ಹಣ್ಣಿನ ಬಗ್ಗೆ ತಿಳಿಸಿಕೊಡಲು ಈ ಮ್ಯಾಂಗೋ ಟೂರಿಸಂ ಹಮ್ಮಿಕೊಂಡಿದೆ. ಗ್ರಾಹಕರಿಗೆ ಗುಣ್ಣಮಟ್ಟದ ಮಾವು, ಮಾಗುವ ಮತ್ತು ಕತ್ತರಿಸುವ ವಿಧಾನ, ದರ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದರು.

ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣು ನೋಡಲು ಬಣ್ಣದಿಂದ ಕಾಣುತ್ತವೆ. ಅವುಗಳನ್ನು ವ್ಯಾಪಾರಸ್ಥರು ರಾಸಾಯನಿಕ ಮಿಶ್ರಣದಿಂದ ಮಾಗಿಸಿರುತ್ತಾರೆ. ಇವುಗಳ ಸೇವನೆಯಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಶ್ರೀಶೈಲ ದಿಡ್ಡಿಮನಿ ಹೇಳಿದರು.

ಒಂದು ಗಿಡದಲ್ಲಿ 400-500 ಕಾಯಿಗಳು ಬಿಡುತ್ತವೆ. ಮಾವಿನಲ್ಲಿ ಎ,ಬಿ ಮತ್ತು ಸಿ ಎಂಬ ಮೂರು ವಿಧಗಳನ್ನು ಮಾಡಲಾಗಿದೆ. 250 ಗ್ರಾಂ ತೂಗವ ಹಣ್ಣನ್ನು ರಫ್ತು ಮಾಡಲು, 122 ಗ್ರಾಂ ತೂಗುವ ಹಣ್ಣು ಸ್ಥಳೀಯ ಮಾರುಕಟ್ಟೆಗೆ ಹಾಗೂ 10 ಗ್ರಾಂ ಗಿಂತ ಹೆಚ್ಚು-ಕಡಿಮೆ ತೂಗುವ ಹಣ್ಣನ್ನ ಬಿಜೋತ್ಪಾದನೆಗೆ ಉಪಯೋಗಿಸಲಾಗುತ್ತದೆ. ಗ್ರಾಹಕರ ಹಾಗೂ ರೈತರ ನಡುವೆ ನೇರ ಮಾರುಕಟ್ಟೆ ಸೃಷ್ಟಿಸಲು, ಗುಣಮಟ್ಟದ ಮಾವು ಬೆಳವಣಿಗೆಗೆ ಹಾಗೂ ಕೃಷಿ ಪ್ರವಾಸೋದ್ಯಮ ಪ್ರೋತ್ಸಾಯಿಸಲು ಪುನಃ 25ರಂದು ಧಾರವಾಡ ತಾಲೂಕಿನ ಹಳ್ಳಿಗೇರಿ ಹಾಗೂ 24, 25ರಂದು ಹುಬ್ಬಳ್ಳಿ ತಾಲೂಕಿನಲ್ಲಿ ಟೂರಿಸಂ ಹಮ್ಮಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *