ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ

Public TV
1 Min Read

– ಸೂಸೈಡ್ ಪಾಯಿಂಟ್‍ನಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ

ಮಂಗಳೂರು: ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಅವರ ಕಾರು ಕೊನೆಯದಾಗಿ ಪತ್ತೆಯಾದ ಮಂಗಳೂರಿನ ನೇತ್ರಾವತಿ ಸೇತುವೆ ಈಗ ಸೂಸೈಡ್ ಪಾಯಿಂಟ್ ಆಗಿ ಪರಿವರ್ತನೆಯಾಗಿದ್ದು, ಈವರೆಗೆ ಸುಮಾರು 8 ಜನ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವಕನೊಬ್ಬ ಇಂದು ಮುಂಜಾನೆ ಸೇತುವೆ ಮೇಲೆ ತನ್ನ ಬೈಕ್ ನಿಲ್ಲಿಸಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ಉಳ್ಳಾಲಬೈಲು ನಿವಾಸಿ ನವೀಶ್ ಕೊಟ್ಟಾರಿ (28) ಆತ್ಮಹತ್ಯೆ ಮಾಡಿಕೊಂಡ ಯುವಕ.

ನವೀಶ್ ಕೊಟ್ಟಾರಿ ಇಂದು ಬೆಳಗ್ಗೆ ಸುಮಾರು 6.30 ಗಂಟೆಗೆ ಜಪ್ಪಿನಮೊಗರು ಸಮೀಪ ಇರುವ ನೇತ್ರಾವತಿ ಸೇತುವೆಗೆ ತನ್ನ ಬೈಕ್‍ನಲ್ಲಿ ಬಂದಿದ್ದ. ಕೆಲ ಕಾಲ ಸೇತುವೆಯ ಮೇಲೆ ನಿಂತುಕೊಂಡಿದ್ದ ನವೀಶ್ ಬಳಿಕ ಏಕಾಏಕಿ ಜನ ಸಂಚಾರ ಇದ್ದಾಗಲೇ ಸೇತುವೆಯಿಂದ ನದಿಗೆ ಹಾರಿದ್ದಾರೆ. ತಕ್ಷಣ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯ ನಡೆಸಿದ್ದು, ನವೀಶ್ ಕೊಟ್ಟಾರಿ ಮಾತ್ರ ಪತ್ತೆಯಾಗಲಿಲ್ಲ.

ಉಳ್ಳಾಲದ ಕೋಟೆಪುರ ಸಮುದ್ರ ಕಿನಾರೆಯಲ್ಲಿ ಮಧ್ಯಾಹ್ನ ನವೀಶ್ ಕೊಟ್ಟಾರಿಯ ಮೃತದೇಹ ಪತ್ತೆಯಾಗಿದೆ. ತೊಕ್ಕೊಟ್ಟು ಸಮೀಪದ ಕುತ್ತಾರು ಎಂಬಲ್ಲಿ ಶಾಮಿಯಾನದ ಅಂಗಡಿ ನಡೆಸುತ್ತಿದ್ದ ನವೀಶ್ ಕೊಟ್ಟಾರಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *