ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ: ಸಿದ್ದರಾಮಯ್ಯ

Public TV
2 Min Read

– ಬಿಎಸ್‍ವೈಗೆ ಹಣಕಾಸಿನ ಜ್ಞಾನವಿಲ್ಲ

ಮಂಗಳೂರು: ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ ಎಂದು ಕೇಂದ್ರ ಸರ್ಕಾರದ ನೆರೆ ಪರಿಹಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1 ಲಕ್ಷ ಕೋಟಿ ರೂ. ನಷ್ಟವಾಗಿದ್ದು 2.5 ಲಕ್ಷ ಮನೆ ನಾಶವಾಗಿದೆ. ಎರಡು ತಿಂಗಳ ನಂತರ 1,200 ಕೋಟಿ ಬಿಡುಗಡೆ ಮಾಡಿದ್ದಾರೆ. ಕನಿಷ್ಠ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಇವರು ಬಿಡುಗಡೆ ಮಾಡಿದ ಹಣ ಬಕಾಸುರನ ಹೊಟ್ಟೆಗೆ 3 ಕಾಸಿನ ಮಜ್ಜಿಗೆ ರೀತಿಯಲ್ಲಿ ಇದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಅದ್ದರಿಂದ ರಾಜ್ಯ ಸರ್ಕಾರದ ಖಜಾನೆಯಿಂದ ಖರ್ಚು ಮಾಡಬೇಕಿದೆ. ಯಡಿಯೂರಪ್ಪ ಪೆದ್ದು ಪೆದ್ದಾಗಿ ಹೇಳಿಕೆ ನೀಡುತ್ತಿದ್ದಾರೆ. ಸರಿಯಾಗಿ ತೆರಿಗೆ ವಸೂಲಿ ಮಾಡಿದರೆ ಹಣಕಾಸಿನ ಸಮಸ್ಯೆ ಆಗುವುದಿಲ್ಲ. ಯಡಿಯೂರಪ್ಪ ತಂತಿ ಮೇಲೆ ನಡಿಯೋದು ಬೇಡ. ವಯಸ್ಸಾಗಿದೆ ಬಿದ್ದರೆ ತುಂಬಾ ಕಷ್ಟ ಆಗುತ್ತೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. 2020ಕ್ಕೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರವಾಹಕ್ಕೆ ತುಂಬಾ ನಷ್ಟವಾಗಿದೆ. ಪ್ರಾರ್ಥಮಿಕ ಹಂತದಲ್ಲಿ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕಿತ್ತು. ಈಗ ಕೇಂದ್ರ ಸರ್ಕಾರ 1,200 ಕೋಟಿ ಕೊಟ್ಟಿದ್ದು ಎಲ್ಲಿಗೂ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿದೆ ಎನ್ನುವುದಕ್ಕೆ ಅರ್ಥ ಇಲ್ಲ. ಯಡಿಯೂರಪ್ಪಗೆ ಹಣಕಾಸಿನ ಜ್ಞಾನ ಇಲ್ಲ. ಜನ ತೆರಿಗೆ ಕಟ್ಟೋದಿಲ್ವಾ? ಪ್ರತಿ ತಿಂಗಳು ತೆರಿಗೆ ಸಂಗ್ರಹ ಆಗುತ್ತಿಲ್ಲವೇ? ಬೊಕ್ಕಸ ಖಾಲಿಯಂದ್ರೆ ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದರ್ಥ ಎಂದು ಬಿಎಸ್‍ವೈ ಅವರನ್ನು ಟೀಕೆ ಮಾಡಿದರು.

ಇದೇ ವೇಳೆ ಮೋದಿಯನ್ನ ಪ್ರಶ್ನೆ ಮಾಡಿದ್ದಕ್ಕೆ ದೇಶದ್ರೋಹಿ ಎಂಬ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಇದು ಸರ್ವಾಧಿಕಾರಿ ಸರ್ಕಾರದ ಲಕ್ಷಣ. ಜರ್ಮನಿಯಲ್ಲಿ ಹಿಟ್ಲರ್ ಕೂಡ ಇದೇ ನೀತಿ ಅನುಸರಿಸಿದ್ದ. ಯಾರಾದರೂ ಅವನನ್ನು ಪ್ರಶ್ನೆ ಮಾಡಿದರೆ ಕೇಸು ಹಾಕಿಸಿ ಬಂಧಿಸುತ್ತಿದ್ದ. ಹಿಟ್ಲರ್ ಕಾಲದಲ್ಲೂ ವಿರೋಧಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದರು. ಈಗ ಮೋದಿ ಸರ್ಕಾರವೂ ಅದನ್ನೇ ಮಾಡುತ್ತಿದೆ ಎಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *