ಮಂಗಳೂರು ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟ- ಪಾಲಿಕೆ ಟಿಕೆಟ್‍ಗಾಗಿ ಮಾರಾಮಾರಿ

Public TV
2 Min Read

– ರಮಾನಾಥ ರೈ, ಖಾದರ್ ಮುಂದೆಯೇ ಡಿಶುಂ ಡಿಶುಂ
– ಮೊಯಿದ್ದೀನ್ ಬಾವಾ ಮೇಲೂ ಹಲ್ಲೆ
– ಬಿಜೆಪಿ ಸೇರಿದ ಕಾಂಗ್ರೆಸ್ ಕಾರ್ಪೊರೇಟರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ವಿಚಾರಕ್ಕೆ ಕಾರ್ಯಕರ್ತರ ಮಧ್ಯೆ ಮಾರಾಮಾರಿಯಾಗಿದೆ.

ಮಂಗಳೂರು ಪಾಲಿಕೆ ಚುನಾವಣೆಯು ನವೆಂವರ್ 12ರಂದು ನಡೆಯಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಿಸಿದರು. ಈ ವಿಚಾರವಾಗಿ ನಗರದಲ್ಲಿ ಹೈಡ್ರಾಮಾ ನಡೆದಿದೆ.

ಮಾಜಿ ಮೇಯರ್ ಗುಲ್ಜಾರ್ ಬಾನು ಈ ಹಿಂದೆ ಸುರತ್ಕಲ್ ವಾರ್ಡ್ ನಿಂದ ಸ್ಪರ್ಧಿಸಿ ಸೋತಿದ್ದರು. ಆದರೂ ಈ ಬಾರಿ ಟಿಕೆಟ್ ನೀಡುವುದಾಗಿ ಮಾಜಿ ಶಾಸಕ ಮೊಯಿದ್ದೀನ್ ಬಾವ ಭರವಸೆ ಕೊಟ್ಟಿದ್ದರು. ಬುಧವಾರ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುರತ್ಕಲ್ ವಾರ್ಡ್ ಟಿಕೆಟ್ ಬೇರೆಯವರ ಪಾಲಾಗಿದ್ದು ಗುಲ್ಜಾರ್ ಬಾನು ಅಸಮಾಧಾನಕ್ಕೆ ಕಾರಣವಾಯಿತು.

ಸುದ್ದಿಗೋಷ್ಠಿ ವೇಳೆ ಗಲಾಟೆ ಆರಂಭವಾಗಿದ್ದರಿಂದ ಮಾಜಿ ಶಾಸಕ ಮೊದಿನ್ ಬಾವಾ ಸಭಾಂಗಣದಿಂದ ಹೊರಗೆ ಬಂದರು. ಆಗ ಪಾಲಿಕೆ ಟಿಕೆಟ್ ಕೈತಪ್ಪಿದ್ದಕ್ಕೆ ಗುಲ್ಜಾರ್ ಬಾನು, ಮೊದಿನ್ ಬಾವಾ ವಿರುದ್ಧ ಕಿಡಿಕಾರಿದರು. ಇದರಿಂದಾಗಿ ನಾಯಕರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ಉಂಟಾಗಿ, ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.

ಈ ಮಧ್ಯೆ ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ಅಜೀಂ, ಮೊಯ್ದಿನ್ ಬಾವಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದರಾಗಿ ಗಲಾಟೆ ಮತ್ತಷ್ಟು ಜೋರಾಯಿತು. ತಕ್ಷಣವೇ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ತಡೆದರು.

ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಉಸ್ತುವಾರಿ ವಿ.ಆರ್.ಸುದರ್ಶನ್ ಇದ್ದಾಗಲೇ ಘಟನೆ ನಡೆದಿದೆ. ಇತ್ತ ಈ ಬಾರಿ ಟಿಕೆಟ್ ವಂಚಿತರಾದ ಕಾಂಗ್ರೆಸ್ಸಿನ ಹಾಲಿ ಕಾರ್ಪೊರೇಟ್ ಆಶಾ ಡಿಸಿಲ್ವಾ ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ವೆಲೆನ್ಸಿಯಾ ವಾರ್ಡಿನಲ್ಲಿ ಆಶಾ ಡಿಸಿಲ್ವಾಗೆ ಟಿಕೆಟ್ ಕನ್ಫರ್ಮ್ ಆಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಮಾಜಿ ಶಾಸಕ ಜೆ.ಆರ್.ಲೋಬೋ ಅರಿಂದಾಗಿ ತಮ್ಮವರಿಗೆ ಟಿಕೆಟ್ ತಪ್ಪಿದೆಯೆಂದು ಕಾಂಗ್ರೆಸ್ಸಿನ ಕೆಲವು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಪ್ರಸಂಗವೂ ರಾತ್ರಿ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *