ಮಂಗಳೂರು ಮೇಯರ್ ಗುಂಡಾಗಿರಿ- ಅಪಾರ್ಟ್‌ಮೆಂಟ್‌ ಕಾವಲುಗಾರ ದಂಪತಿ ಮೇಲೆ ಹಲ್ಲೆ

Public TV
1 Min Read

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ತಮ್ಮ ಅಪಾರ್ಟ್ ಮೆಂಟ್ ಕಾವಲುಗಾರ ದಂಪತಿಗೆ ಹಲ್ಲೆಗೈದು ಗೂಂಡಾಗಿರಿ ತೋರಿದ್ದಾರೆಂಬ ಆರೋಪ ಕೇಳಿಬಂದಿದೆ.

ಗುರುವಾರ ಸಂಜೆ ಅಪಾರ್ಟ್ ಮೆಂಟ್ ಕಾವಲುಗಾರ ಮನೆಗೆ ಏಕಾಏಕಿ ನುಗ್ಗಿರುವ ಮೇಯರ್ ಕವಿತಾ ಸನಿಲ್, ಕಾವಲುಗಾರ ಪತ್ನಿಯ ಜುಟ್ಟು ಹಿಡಿದು ಕಿವಿ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಅಲ್ಲದೇ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆಂದು ಮೇಯರ್ ವಾಸವಿರುವ ಮಂಗಳೂರಿನ ಬಿಜೈನ ಅಪಾರ್ಟ್ ಮೆಂಟ್ ಕಾವಲುಗಾರ ದಂಪತಿ ಆರೋಪಿಸಿದ್ದಾರೆ.

ಮೇಯರ್ ಕವಿತಾ ಸನಿಲ್ ವಾಸವಿರುವ ಆಪಾರ್ಟ್ ಮೆಂಟ್‍ನ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿರುವ ಕಮಲ ಮತ್ತು ಪುಂಡಲೀಕ ದಂಪತಿಗಳೇ ಮೇಯರ್ ನಿಂದ ಪೆಟ್ಟು ತಿಂದವರಾಗಿದ್ದು, ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಗಳಾಗಿದ್ದು, ದಂಪತಿ ಕಳೆದ ಹತ್ತು ತಿಂಗಳಿನಿಂದ ಈ ಫ್ಲಾಟ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ದಂಪತಿ, ಮೇಯರ್ ಮಗಳು ನಮ್ಮ ಮಕ್ಕಳ ಜೊತೆಗೆ ಆಡಲು ಬರುತ್ತಿದ್ದಳು. ಆದರೆ ಆಟದ ವೇಳೆ ಮಕ್ಕಳಿಗೆ ಹೊಡೆದು ರಂಪ ಮಾಡುತ್ತಿದ್ದಳು. ಅದಕ್ಕಾಗಿ ನಮ್ಮ ಮಕ್ಕಳ ಜೊತೆ ಆಡದಂತೆ ಹೇಳಿದ್ದೆ. ಈ ಕಾರಣಕ್ಕಾಗಿಯೇ ಏನು ವಿಚಾರ ಎಂದು ತಿಳಿದುಕೊಳ್ಳದೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಜವಾಬ್ದಾರಿಯುತ ಮೇಯರ್ ಸ್ಥಾನದಲ್ಲಿರುವ ಅವರೇ ಹೀಗೆ ಹೊಡೆದು ಬಡಿದು ಮಾಡಿದ್ರೆ ಹೇಗೆ ಬದುಕೋದು ಅಂತಾ ಬಡ ದಂಪತಿಗಳು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಇದ್ದ ಕಾವಲುಗಾರರ ಮೇಲೆಯು ಇದೇ ರೀತಿ ಹಲ್ಲೆ ಮಾಡಿದ್ದರು ಎಂದು ಕಾವಲುದಾರ ಪತ್ನಿ ಕಮಲ ತಿಳಿಸಿದ್ದಾರೆ.

ಮೇಯರ್ ಕವಿತಾ ಸನಿಲ್ ಮೂಲತಃ ಕರಾಟೆ ಪಟುವಾಗಿದ್ದು ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿದ್ದಾರೆ. ಇದೀಗ ತಮ್ಮ ಕರಾಟೆ ಕೈಚಳಕವನ್ನು ಬಡಪಾಯಿ ಮೇಲೆ ಪ್ರಯೋಗ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *