11 ತಿಂಗಳಿನಿಂದ ಸರ್ಕಾರಿ ವೈದ್ಯರಿಗೆ ವೇತನ ನೀಡದ ರಾಜ್ಯ ಸರ್ಕಾರ

Public TV
2 Min Read

– ಮಂಗ್ಳೂರಿನಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಸರ್ಕಾರಿ ವೈದ್ಯರು

ಮಂಗಳೂರು: ಕಳೆದ ಹನ್ನೊಂದು ತಿಂಗಳಿನಿಂದ ವೇತವೇ ಆಗದ ಹಿನ್ನೆಲೆಯಲ್ಲಿ ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಿಗೆ ಇತ್ತೀಚಿನ ದಿನಗಳಲ್ಲಿ ವೈದ್ಯರು ಬರುವುದೇ ಕಡಿಮೆಯಾಗಿದೆ. ಸಿಇಟಿ ರ‌್ಯಾಂಕ್ ಪಡೆದು ಬರುವ ಕೆಲವು ವೈದ್ಯರು ಮಾತ್ರ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾರೆ. ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಗದೇ ಇರುವುದರಿಂದಲೇ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಬರೋದು ಕಡಿಮೆ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರಿನಲ್ಲಿ ಬುಧವಾರ ವೈದ್ಯರು ವೇತನಕ್ಕಾಗಿ ಬೀದಿಗೆ ಇಳಿದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟ್ ಪಡೆದು ಕಷ್ಟ ಪಟ್ಟು ಓದಿ ವೈದ್ಯರಾದವರು, ಸರ್ಕಾರಿ ನಿಯಮದಂತೆ ನೇಮಕಾತಿಗೆ ಮುನ್ನ ಜಿಲ್ಲಾಸ್ಪತ್ರೆಗಳಲ್ಲಿ ಇಂಟರ್ನ್ ಶಿಪ್ ಮಾಡುಬೇಕು. ಆದರೆ ಮಂಗಳೂರಿನ ಸರ್ಕಾರಿ ವೆನಗಲಾಕ್ ಹಾಗೂ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರು ಕಳೆದ ಹನ್ನೊಂದು ತಿಂಗಳಿಂದ ಸಂಭಾವನೆ ಸಿಗದೆ ಈಗ ವೇತನಕ್ಕಾಗಿ ಧರಣಿ ಕುಳಿತಿದ್ದಾರೆ.

ಸುಮಾರು 52 ವಿದ್ಯಾರ್ಥಿಗಳು ಮಂಗಳೂರಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಇವರ ಸೇವೆಗಾಗಿ ಮಾಸಿಕ ಸಂಭಾವನೆ ನೀಡುತ್ತದೆ. ಆದರೆ ರಾಜ್ಯ ಸರ್ಕಾರ ಹನ್ನೊಂದು ತಿಂಗಳಿನಿಂದ ಪುಡಿಗಾಸನ್ನೂ ನೀಡದೆ ಸತಾಯಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರಿಗೆ ವೈದ್ಯರು ಮನವಿ ಮಾಡಿದ್ದಾರೆ. ಆದರೆ ಇವರ ಮನವಿಗೆ ಸರ್ಕಾರ ಮಾತ್ರ ಕ್ಯಾರೇ ಅಂದಿರಲಿಲ್ಲ.

ಸಿಎಂ ಯಡಿಯೂರಪ್ಪ ಅವರು ಕಳೆದ ಡಿಸೆಂಬರ್ 24ರಂದು ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನವಿಗೆ ಸ್ಪಂದಿಸಿ, ವೆನ್ಲಾಕ್ ಆಸ್ಪತ್ರೆಯ ಎಮರ್ಜೆನ್ಸಿ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದರು. ಆದರೆ ಇನ್ನೂ ಪುಡಿಗಾಸು ಸಿಕ್ಕಿಲ ಒಟ್ಟಿನಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯ ಮತ್ತು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿಯ ಅಸಡ್ಡೆಗೆ ಯುವ ವೈದ್ಯರು ಹೈರಾಣಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಸರಿಯಾಗಿ ವೈದ್ಯರ ನೇಮಕವೇ ಆಗದ ಸಂದರ್ಭದಲ್ಲಿ ಕಷ್ಟ ಪಟ್ಟು ಓದಿ, ವೈದ್ಯರಾದವರು ಸರ್ಕಾರದ ಪುಡಿಗಾಸಿಗಾಗಿ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಬೇಕಾದ ಸ್ಥಿತಿ ಬಂದಿರುವುದು ಮಾತ್ರ ವಿಪರ್ಯಾಸ.

Share This Article
Leave a Comment

Leave a Reply

Your email address will not be published. Required fields are marked *