ಮಂಗ್ಳೂರಿನಲ್ಲಿ ನಡೆದಿದ್ದು ಪ್ರೀಪ್ಲಾನ್ ಗೋಲಿಬಾರ್- ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ಆಕ್ರೋಶ

Public TV
1 Min Read

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಿನ್ನೆಲೆ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್‍ನ ಸಂಚಾಲಕ ವಕೀಲ ಬಾಲನ್ ಅವರು ಪೊಲೀಸರ ಗೋಲಿಬಾರ್ ವಿರುದ್ಧ ಹರಿಹಾಯ್ದರು. ಮಂಗಳೂರಿನ ಗೋಲಿಬಾರ್ ಹತ್ಯೆಯಲ್ಲಿ ಪೊಲೀಸರ ಕೈವಾಡ ಇದೆ. ಎನ್‍ಆರ್‍ಸಿ(ರಾಷ್ಟ್ರೀಯ ನಾಗರಿಕ ನೊಂದಣಿ), ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ) ಇವುಗಳು ಬಿಜೆಪಿಯ ಆರ್‍ಎಸ್‍ಎಸ್‍ನಿಂದ ಜಾರಿಗೆ ಬಂದಿರುವಂತಹದ್ದು. ಈ ಕಾಯ್ದೆಗಳು ದೇಶ ವಿರೋಧಿಯಾಗಿವೆ. ಇವುಗಳ ವಿರುದ್ಧ ಹೋರಾಟ ಮಾಡೋದು ನಮ್ಮ ಅಭಿಪ್ರಾಯವಾಗಿದೆ. ಆದರೆ ಅದನ್ನು ಈ ಬಿಜೆಪಿ ಸಂಘಪರಿವಾರದವರು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಗಳೂರಿನಲ್ಲಿ ಯಾವ ಪೊಲೀಸ್ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೋ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಷ್ಟು ಸುತ್ತು ಫೈರಿಂಗ್ ಮಾಡಿದರೂ ಯಾವುದೇ ಹೆಣ ಬಿದ್ದಿಲ್ಲವೇ ಎಂದು ಅಲ್ಲಿನ ಕಮೀಷನರ್ ಪ್ರಶ್ನೆ ಮಾಡುತ್ತಾರೆ. ಎಲ್ಲವೂ ಪೂರ್ವಯೋಜಿತ ಕ್ರಮ. ಲಾಠಿ ಜಾರ್ಜ್ ಸಹ ಮಾಡುವ ಪರಿಸ್ಥಿತಿ ಇಲ್ಲದ ಕಡೆ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. ಪೊಲೀಸರ ಪ್ರೀಪ್ಲಾನ್‍ನಿಂದಾಗಿಯೇ ಗೋಲಿಬಾರ್ ಆಗಿದೆ. ದೇಶದಲ್ಲಿ 25 ಕೋಟಿ ಮುಸಲ್ಮಾನರು ಭಯದಲ್ಲಿ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *