ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ

Public TV
2 Min Read

ಮಂಗಳೂರು: ಅದು ಮಂಗಳೂರಿನ ಹೊರವಲಯದ ನೇತ್ರಾವತಿ ನದಿ ಮಧ್ಯದಲ್ಲಿರುವ ದ್ವೀಪ ಪ್ರದೇಶ. ಸುತ್ತ ನೀರಿನಿಂದ ಆವೃತವಾಗಿರುವ ಈ ದ್ವೀಪದಲ್ಲಿ ನೂರಾರು ಮಂದಿ ವಾಸವಿದ್ದಾರೆ. ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿರುವ ಈ ಕುಗ್ರಾಮ ಸ್ಮಾರ್ಟ್ ಸಿಟಿ ಮಂಗಳೂರಿನ ಆವರಣದಲ್ಲೇ ಇದ್ದರೂ, ಜನರ ಸಂಪರ್ಕಕ್ಕೆ ಸೇತುವೆಯೇ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಸೋತ ಅಲ್ಲಿನ ಜನರು ತಾವೇ ತಾತ್ಕಾಲಿಕ ಸೇತುವೆಯನ್ನು ರೆಡಿ ಮಾಡಿದ್ದಾರೆ. ಹಗ್ಗದ ಮೇಲಿನ ನಡಿಗೆಯಂತಿರೋ ಈ ಸೇತುವೆ ಸಂಚಾರ ಮಾತ್ರ ತುಂಬಾನೇ ಡೇಂಜರಸ್.

ಸಚಿವ ಯುಟಿ ಖಾದರ್ ಸಿಂಪ್ಲಿಸಿಟಿಗೆ ಮತ್ತೊಂದು ಹೆಸರು. ಮಾನವೀಯತೆ ತೋರೋದರಲ್ಲಿ ಎತ್ತಿದ ಕೈ ಎಂಬ ಮಾತುಗಳನ್ನ ಸಾರ್ವಜನಿಕ ವಲಯದಲ್ಲಿ ಕೇಳಿರುತ್ತೇವೆ. ಆದರೆ ಅವರದ್ದೇ ಕ್ಷೇತ್ರದ ಊರೊಂದರ ಕಣ್ಣೀರ ಕಹಾನಿ ಇಲ್ಲಿದೆ. ಸ್ಮಾರ್ಟ್ ಸಿಟಿಯ ಗರಿ ಸಿಕ್ಕಿಸಿಕೊಂಡಿರುವ ಮಂಗಳೂರು ನಗರದ ಕೂಗಳತೆ ದೂರದಲ್ಲೇ ಇರೋ ಪಾವೂರಿಗೆ ಇನ್ನೂ ಮೂಲಸೌಲಭ್ಯಗಳೇ ಮರೀಚಿಕೆ. ದಿಪದ ಬುಡದಲ್ಲಿ ಕತ್ತಲೇ ಎಂಬಂತೆ ಪಾವೂರು ಇನ್ನು ಕುಗ್ರಾಮವಾಗಿ ಉಳಿದುಕೊಂಡಿದೆ. ನೇತ್ರಾವತಿ ನದಿ ಮಧ್ಯದಲ್ಲಿರುವ ಪಾವೂರು ಎಂಬ ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಿಸಬೇಕೆಂದು ನಡೆಸಿರುವ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ.

ಕಬ್ಬಿಣದ ಪೈಪ್ ಮತ್ತು ಹಲಗೆ ಬಳಸಿ ಗ್ರಾಮಸ್ಥರೇ ನಿರ್ಮಿಸಿರುವ ಈ ಸೇತುವೆಯ ಸಂಚಾರ ಹಗ್ಗದ ಮೇಲಿನ ನಡಿಗೆಯಂತಿದ್ದು, ವಿಸ್ತಾರವಾಗಿರುವ ನದಿಯನ್ನು ದಾಟುವುದೇ ಸಾಹಸವಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಇದೇ ಹಲಗೆಯಲ್ಲಿ ಸಂಚರಿಸುತ್ತಿದ್ದು, ದುರಂತಕ್ಕೆ ಆಹ್ವಾನ ನೀಡುವಂತಿದೆ. ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸತತ ಮೂರು ಬಾರಿ ಸಚಿವರಾದರೂ, ಸೇತುವೆಯ ಬೇಡಿಕೆ ಇನ್ನೂ ಅವರ ಅವರ ಕಿವಿ ಮುಟ್ಟಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ದೋಣಿಯಲ್ಲಿ ಸಂಚರಿಸುತ್ತಿದ್ದ ಜನರು ಸದ್ಯಕ್ಕೆ ಹಲಗೆಯ ಸೇತುವೆಯಲ್ಲಿ ಸಾಗುತ್ತಿದ್ದಾರೆ. ಆದರೆ, ಯಾವಾಗ ಬೀಳುತ್ತೋ ಅನ್ನುವ ಭಯದಲ್ಲೇ ಜನ ಓಡಾಡುತ್ತಿದ್ದಾರೆ. ಈ ಸೇತುವೆ ಬೇಸಿಗೆಗೆ ಸೀಮಿತವಾಗಿದ್ದು, ಜೂನ್ ವೇಳೆಗೆ ನದಿ ತುಂಬಿದಾಗ ಜನರು ಮತ್ತೆ ದೋಣಿಯನ್ನೇ ಅವಲಂಬಿಸಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *