ಮಂಗಳೂರು ರ‍್ಯಾಲಿಗೆ ಕ್ಷಣಗಣನೆ-ಕಾವೇರ್ತಿದೆ ಕರಾವಳಿ ಕದನ

Public TV
2 Min Read

ಬೆಂಗಳೂರು: ಕಾಂಗ್ರೆಸ್-ಬಿಜೆಪಿ ಮಧ್ಯೆ ಇವತ್ತು ಕರಾವಳಿ ಕದನ ನಡೆಯಲಿದೆ. ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಖಂಡನೆ ಜೊತೆಗೆ ಸಚಿವ ರಮಾನಾಥ್ ರೈ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇವತ್ತು ಮಂಗಳೂರು ಚಲೋ ರ್ಯಾಲಿ ಹಮ್ಮಿಕೊಂಡಿದೆ.

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮಂಗಳೂರು, ಹುಬ್ಬಳ್ಳಿ, ಹಾಸನ, ಚಿಕ್ಕಬಳ್ಳಾಪುರ, ನೆಲಮಂಗಲ, ಚಾಮರಾಜನಗರ, ಕಲಬುರಗಿ, ಉಡುಪಿಗಳಲ್ಲಿ ಜಿಲ್ಲಾ ಎಸ್‍ಪಿಗಳು ಅನುಮತಿ ನಿರಾಕರಿಸಿದ್ದಾರೆ. ರ‍್ಯಾಲಿಗೆ ತಡೆ ನೀಡದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಬಿಜೆಪಿ ಮನವಿ ಸಲ್ಲಿಸಿದೆ. ಇನ್ನು ರ‍್ಯಾಲಿಗೆ ತೊಂದರೆ ಕೊಡ್ಬೇಡಿ. ಬಾಲ ಬಿಚ್ಚಿದ್ರೆ ಕಟ್ ಮಾಡಿ ಅಂತಾ ಸಿಎಂ ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇವತ್ತಿನಿಂದ ಮಂಗಳೂರು ಚಲೋ ಆರಂಭವಾಗಲಿದೆ. ಪೊಲೀಸರ ಅನುಮತಿ ನಿರಾಕರಣೆಯ ನಡುವೆಯೂ ರ‍್ಯಾಲಿ ನಡೆಸಲು ಬಿಜೆಪಿ ಮುಂದಾಗಿದೆ. ಒಟ್ಟು 5 ವಿಭಾಗಗಳಿಂದ ಬೈಕ್ ರ‍್ಯಾಲಿ ಹೊರಡಲಿದ್ದು, ಇವತ್ತು ಬೆಂಗಳೂರು, ಹುಬ್ಬಳ್ಳಿಯಿಂದ ರ್ಯಾಲಿ ಹೊರಟ್ರೆ, ಸೆಪ್ಟಂಬರ್ 6 ರಂದು ಮೈಸೂರು, ಉಡುಪಿ, ಶಿವಮೊಗ್ಗದಿಂದ ರ‍್ಯಾಲಿ ಹೊರಡಲಿದೆ. ಎಲ್ಲಾ ರ‍್ಯಾಲಿಗಳು ಸೆಪ್ಟಂಬರ್ 6 ರಂದು ರಾತ್ರಿ ಉಪ್ಪಿನಂಗಡಿಯಲ್ಲಿ ಸಮಾವೇಶಗೊಳ್ಳಲಿದ್ದು, ಸೆಪ್ಟಂಬರ್ 7 ರಂದು 5 ವಿಭಾಗಗಳ ರ‍್ಯಾಲಿ ಮಂಗಳೂರು ಪ್ರವೇಶಿಸಲಿದೆ. ಬೆಂಗಳೂರಿನಲ್ಲಿ ಇವತ್ತು ಫ್ರೀಡಂ ಪಾರ್ಕ್ ನಲ್ಲಿ ರ‍್ಯಾಲಿಗೆ ಚಾಲನೆ ಸಿಗಲಿದೆ.

ಇನ್ನು ಬೆಂಗಳೂರಿನಿಂದ ಹೊರಡುವ ರ‍್ಯಾಲಿಯ ರೂಟ್ ಮ್ಯಾಪ್ ಇಲ್ಲಿದೆ.

> ಇವತ್ತು ಬೆಳಗ್ಗೆ 10.30ಕ್ಕೆ ಸಮಾವೇಶ, ಫ್ರೀಂಡಪಾರ್ಕ್ ಬೆಂಗಳೂರು.
> 11ಕ್ಕೆ ಹೊರಡಲಿರುವ ಬಿಜೆಪಿ ಬೈಕ್ ರ‍್ಯಾಲಿ.
> ಮಧ್ಯಾಹ್ನ 1ಕ್ಕೆ ನೆಲಮಂಗಲದಲ್ಲಿ ಮಂಗಳೂರು ಚಲೋ ಸಮಾವೇಶ.
> ಕುಣಿಗಲ್ ಬೈಪಾಸ್ ಮೂಲಕ ಹಾಸನಕ್ಕೆ ಪ್ರಯಾಣ.
> ಹಾಸನದಲ್ಲಿ ಇವತ್ತು ರಾತ್ರಿ ವಾಸ್ತವ್ಯ.
> ಸೆ.6 ಕ್ಕೆ ಸಕಲೇಶಪುರದ ಮೂಲಕ ಮಂಗಳೂರಿನತ್ತ ಪ್ರಯಾಣ.
> ಸೆ.6ಕ್ಕೆ ರಾತ್ರಿ ಉಪ್ಪಿನಂಗಡಿಯಲ್ಲಿ ವಾಸ್ತವ್ಯ.
> ಸೆಪ್ಟಂಬರ್ 7ಕ್ಕೆ ಮಂಗಳೂರು ಪ್ರವೇಶಿಸಲಿರುವ ರ್ಯಾಲಿ.
> ಸೆಪ್ಟಂಬರ್ 7ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶ, ರಾಜ್ಯ ಬಿಜೆಪಿ ನಾಯಕರು ಭಾಗಿ

ಬಿಜೆಪಿಯ ಮಂಗಳೂರು ಚಲೋ ರ‍್ಯಾಲಿ ಮತ್ತು ಸಮಾವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಲು ಕಾರಣಗಳು ಹೀಗಿವೆ.

* ರ‍್ಯಾಲಿ ವೇಳೆ ದುಷ್ಕರ್ಮಿಗಳು ದಾಳಿ ಮಾಡುತ್ತಾರೆಂಬ ಗುಪ್ತಚರ ಇಲಾಖೆ ಮಾಹಿತಿ (ಪ್ರಮುಖ ಕಾರಣ)
* ನೋಟಿಸ್ ನೀಡಿ ಕೆಲವೊಂದು ಮಾಹಿತಿ ಕೇಳಲಾಗಿತ್ತು, ಆದ್ರೆ ಈವರೆಗೆ ಮಾಹಿತಿ ನೀಡಿಲ್ಲ.
* ನಗರದಲ್ಲಿ ಯಾವುದೇ ಸಭೆ, ಮೆರವಣಿಗೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
* 1000 ಬೈಕ್‍ಗಳು ರ‍್ಯಾಲಿಯಲ್ಲಿ ಭಾಗಿಯಾದ್ರೆ ಸಂಚಾರ ದಟ್ಟಣೆಯಾಗುತ್ತದೆ, ಜನರಿಗೆ ತೊಂದರೆಯಾಗುತ್ತದೆ.
* ರ‍್ಯಾಲಿ ವೇಳೆ ಇತರೆ ವಾಹನಗಳೊಂದಿಗೆ ಅಪಘಾತ ಉಂಟಾದ್ರೆ ಸಾರ್ವಜನಿಕೆ ನೆಮ್ಮದಿಗೆ ಭಂಗ.
* ಬೈಕ್ ರ‍್ಯಾಲಿ ಹಿನ್ನೆಲೆಯಲ್ಲಿ ನಗರದ ಸಂಚಾರಿ ವಿಭಾಗದಿಂದಲೂ ಅನುಮತಿ ಪಡೆದಿಲ್ಲ.
* ಬೈಕ್ ರ‍್ಯಾಲಿಗೆ ಏಕಕಾಲದಲ್ಲಿ ಪೊಲೀಸರನ್ನ ನಿಯೋಜಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗುತ್ತದೆ.

ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲಿರುವ ಬಿಎಸ್ ವೈ, ಬಳಿಕ ಬೈಕ್ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರು ರ‍್ಯಾಲಿಗೆ ಮಂಗಳೂರಿನತ್ತ ತೆರಳಲಿದೆ. ಆದ್ರೆ ಫ್ರೀಡಂ ಪಾರ್ಕ್ ಸಮಾವೇಶಕ್ಕೆ, ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ಹೊರಡಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *