ಚಿನ್ನ ಕದ್ದಿದ್ದಾಳೆ ಎಂದು ಬಡ ಕುಟುಂಬದ ಬಾಲಕಿಗೆ ಪೊಲೀಸರಿಂದ ವಿದ್ಯುತ್ ಶಾಕ್

Public TV
1 Min Read

– ಆರೋಪವನ್ನು ತಿರಸ್ಕರಿಸಿದ ಸಂಪ್ಯ ಪೊಲೀಸರು

ಮಂಗಳೂರು: ಬಡ ಕುಟುಂಬವೊಂದರ ಬಾಲಕಿಯನ್ನು ಠಾಣೆಗೆ ಕರೆಯಿಸಿ ವಿದ್ಯುತ್ ಶಾಕ್ ನೀಡಿದ್ದಾರೆ ಎನ್ನುವ ಆರೋಪ ದಕ್ಷಿಣ ಕನ್ನಡದ ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರ ಮೇಲೆ ಕೇಳಿಬಂದಿದೆ

ಅಪ್ರಾಪ್ತ ಬಾಲಕಿಗೂ ಈ ಸಂಬಂಧ ಪೊಲೀಸರು ಹಲ್ಲೆ ನಡೆಸಿದ್ದು ಬಾಲಕಿಯನ್ನು ಇದೀಗ ಪುತ್ತೂರು ಸರಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ.

ಏನಿದು ಪ್ರಕರಣ?
ನನ್ನ ಮನೆಯಿಂದ ಚಿನ್ನದ ಹಾರ ಕಳವಾಗಿದ್ದು, ಬಾಲಕಿ ಈ ಚಿನ್ನವನ್ನು ಕದ್ದಿದ್ದಾಳೆ ಎಂದು ಸಂಪ್ಯ ಪೊಲೀಸ್ ಠಾಣೆಗೆ ಕೌಡಿಚ್ಚಾರ್‍ ನ ಮುಮ್ತಾಜ್ ಎಂಬವರು ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಸಂಪ್ಯ ಪೊಲೀಸರು ಬಾಲಕಿ ಹಾಗೂ ಆಕೆಯ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಪೋಷಕರಿಗೆ ಸೇರಿದಂತೆ ಅಪ್ರಾಪ್ತ ಬಾಲಕಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನಾನು ಚಿನ್ನ ಕದ್ದಿರುವುದನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಹೇರಿದ್ದು, ಲಾಠಿಯಿಂದ ಹಲ್ಲೆ ನಡೆಸಿದ್ದಾರಲ್ಲದೆ ವಿದ್ಯುತ್ ಶಾಕ್ ಕೂಡಾ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಬಾಲಕಿ ಮುಮ್ತಾಜ್ ಮನೆಗೆ ಶುಕ್ರವಾರದಂದು ಹೋಗಿದ್ದು, ಆ ಬಳಿಕ ಚಿನ್ನ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸಂಪ್ಯ ಪೋಲೀಸರು ಈ ರೀತಿಯ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *